ಬೆಂಗಳೂರು, ಆ. 28– ರಾಜ್ಯ ಸರಕಾರ ವಸೂಲು ಮಾಡುವ ಭೂಕಂದಾಯದ ಇಡೀ ಆದಾಯವನ್ನು ತಾಲ್ಲೂಕು ಮಂಡಳಿ ಹಾಗೂ ಪಂಚಾಯಿತಿಗಳಿಗೆ 1969ರ ಏಪ್ರಿಲ್ 1 ರಿಂದ ನೀಡಲು ಇಂದು ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.
ಸರ್ಕಾರದ ಇಂದಿನ ನಿರ್ಧಾರದ ಪ್ರಕಾರ ತಾಲ್ಲೂಕು ಅಭಿವೃದ್ಧಿ ಮಂಡಳಿಗಳು ಭೂಕಂದಾಯದಲ್ಲಿ ಶೇಕಡಾ 50 ರಷ್ಟನ್ನೂ, ಗ್ರಾಮ ಪಂಚಾಯಿತಿಗಳು ಶೇ. 30 ರಷ್ಟನ್ನೂ ಪಡೆಯುವುವು.
ರೈಲು ಬಂತು
ಬೆಂಗಳೂರು, ಆ. 28– ಮಕ್ಕಳ ಮನರಂಜನೆಯ ಪುಟಾಣಿ ರೈಲು ಇಂದು ಕಂಬಿ ಮೇಲೆ ನಿಂತಿತು. ಕಬ್ಬನ್ ಪಾರ್ಕಿನಲ್ಲಿ ನಿರ್ಮಿಸಲಾಗಿರುವ ನಿಲ್ದಾಣದ ಬಳಿ ಎಂಜಿನ್ ನಿಂತಿದ್ದು ಅದಕ್ಕೆ ‘ಡಬ್ಬಿ’ಗಳನ್ನು ಲಗತ್ತಿಸಲಾಗಿದೆ.
ರೈಲು ಓಡಲು ನಾಲ್ಕು ಸಾವಿರ ಅಡಿ ಕಂಬಿ ಹಾಕಲಾಗಿದೆ. ಸಿಗ್ನಲ್ಗಳನ್ನು ನಿರ್ಮಿಸಲಾಗಿದೆ. ತಾತ್ಕಾಲಿಕ ಕಾರ್ಯಕ್ರಮದಂತೆ ನೆಹರು ಜಯಂತಿ ದಿನ ಮಕ್ಕಳ ದಿನಾಚರಣೆ ಸಂಬಂಧದಲ್ಲಿ ನವೆಂಬರ್ 14 ರಂದು ಈ ರೈಲಿನ ಓಡಾಟ ಆರಂಭವಾಗುವ ನಿರೀಕ್ಷೆ ಇದೆ. ಅದಕ್ಕೆ ಮುನ್ನ ಪ್ರಾಯೋಗಿಕ ಓಡಾಟ ನಡೆಯಲಿದೆ.
ಐದು ಸಾವಿರ ಗ್ರಾಮಗಳಿಗೆ ಕಂದಾಯದ ಹೊರೆ ಕಡಿಮೆ
ಬೆಂಗಳೂರು, ಆ. 28– ರಾಜ್ಯದ ಮಂತ್ರಿ ಮಂಡಲ ಇಂದು ಕೈಗೊಂಡ ಪ್ರಮುಖ ನಿರ್ಧಾರವೊಂದರ ಪ್ರಕಾರ, ಸುಮಾರು 5000 ಗ್ರಾಮಗಳಿಗೆ ಸಂಬಂಧಿಸಿದಂತೆ ಕಂದಾಯದ ಹೊರೆ ಕಡಿಮೆಯಾಗುವುದೆಂದು ನಿರೀಕ್ಷಿಸಲಾಗಿದೆ.
ಕೆಲವು ಪ್ರದೇಶಗಳಲ್ಲಿ ಕಂದಾಯದ ಪುನರ್ ವಿಮರ್ಶೆಗೆ ಆಜ್ಞೆ ಮಾಡಲು ಸೂಕ್ತ ಅಧಿಕಾರವನ್ನು ಪಡೆಯಲು ಮಂತ್ರಿಮಂಡಲ ತೀರ್ಮಾನಿಸಿತು.
ಮಾಸ್ಕೊ ಒಪ್ಪಂದ ‘ಒತ್ತಾಯದ’ ಷರತ್ತು: ಜೆಕ್ ರೇಡಿಯೋ ಪ್ರಸಾರ
ಪ್ರಾಗ್, ಆ. 28– ಜೆಕೊಸ್ಲೊಕಿಯಾವನ್ನು ಸೋವಿಯತ್ ಬಣದಪಡೆಗಳು ಆಕ್ರಮಿಸಿಕೊಂಡಿರುವ ಸಮಯದಲ್ಲಿ ಮಾಸ್ಕೊದಲ್ಲಿ ಆದ ‘ಒತ್ತಾಯದ’ ಒಪ್ಪಂದವನ್ನು, ನಾಜಿ ಜರ್ಮನಿಗೆ ರಾಷ್ಟ್ರವನ್ನುಮಾರಿದ 1938ರ ಮ್ಯೂನಿಚ್ ಕೌಲಿಗೆ ಜೆಕ್ ರೇಡಿಯೋ ಇಂದು ಹೋಲಿಸಿತು.