ಲಂಡನ್ ಚರ್ಚೆ ರಹಸ್ಯ ಅಲ್ಲ; ‘ಪ್ರಧಾನಿ ಭೇಟಿಗೆ ಸಿದ್ಧತೆ’
ಮುಂಬೈ, ಏ. 28 (ಪಿಟಿಐ)– ಲಂಡನ್ನಲ್ಲಿ ಭಾರತ ಮತ್ತು ಅಮೆರಿಕ ನಡುವಣ ಮಾತುಕತೆಯಲ್ಲಿ ಯಾವುದೇ ರಹಸ್ಯ ಇಲ್ಲ. ಇದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ವಾಷಿಂಗ್ಟನ್ ಭೇಟಿಯ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮ ಅಷ್ಟೇ ಎಂದು ಬ್ರಿಟನ್ನಲ್ಲಿ ಭಾರತದ ರಾಯಭಾರಿಯಾಗಿರುವ ಡಾ. ಎಲ್.ಎಂ. ಸಿಂಘ್ವಿ ಅವರು ಇಂದು ಇಲ್ಲಿ ಹೇಳಿದರು.
ದ್ವಿಪಕ್ಷೀಯ ಮಾತುಕತೆಗಳಿಗೆ ಮೂರನೇ ರಾಷ್ಟ್ರವೊಂದರ ಸ್ಥಳವನ್ನು ಆಯ್ದುಕೊಂಡಿರುವುದು ಪರಸ್ಪರ ಅನುಕೂಲದ ದೃಷ್ಟಿಯಿಂದಲೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ. ಈ ರೀತಿ ಮಾತುಕತೆ ನಡೆದ ಬೇಕಾದಷ್ಟು ಉದಾಹರಣೆಗಳಿವೆ ಎಂದು ಅವರು ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಪಿಟಿಐನೊಂದಿಗೆ ಮಾತನಾಡುತ್ತಾ ತಿಳಿಸಿದರು.
ಭಾರತದ ರಾಜತಂತ್ರವು ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವಷ್ಟು ಪಕ್ವವಾಗಿದೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಭಾರತದ ನಿಲುವು ದೃಢವಾಗಿದ್ದರೂ ಇನ್ನೊಬ್ಬರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುವಷ್ಟು ಕಿವುಡರಾಗಿ ಇರಬೇಕೆಂದಿಲ್ಲ ಎಂದರು.
ರಮೇಶ್ ಪರ ವಕೀಲರ ಹಾಜರಿ
ಬೆಂಗಳೂರು, ಏ. 28– ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭೆ ಕ್ಷೇತ್ರದ ಮರುಚುನಾವಣೆ ದಿನ ಅಲ್ಲಿನ ಪ್ರವಾಸಿ ಮಂದಿರದ ಬಳಿ ಗೋಲಿಬಾರ್ನಿಂದ ಗಂಗಯ್ಯ ಎಂಬುವವರು ಸತ್ತ ಪ್ರಕರಣ ಕುರಿತು ನ್ಯಾಯಾಂಗ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಂ.ಎಸ್. ಪಾಟೀಲ್ ಅವರ ಮುಂದೆ ಇಂದು ಸಚಿವ ರಮೇಶ್ ಅವರ ಪರವಾಗಿ ವಕೀಲರೊಬ್ಬರು ಹಾಜರಾದರು.
ಇದರಿಂದ ರಮೇಶ್ ಗೈರುಹಾಜರಿ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ತೆರೆಬಿತ್ತು.
ವಕೀಲರಾದ ಎಚ್. ಸುಬ್ರಹ್ಮಣ್ಯ ಜೋಯಿಸ್ ಹಾಜರಾಗಿ ರಮೇಶ್ ಅವರ ಪರ ವಕಾಲತ್ ಸಲ್ಲಿಸಿದರು.
ಈಗ ‘ಹರಿಜನ’ ಸರದಿ
ನವದೆಹಲಿ, ಏ. 28 (ಯುಎನ್ಐ)– 420 ಸಂಖ್ಯೆಯನ್ನು ಬಳಸಬಹುದೇ ಎಂಬ ವಿವಾದ ಈಗ ಮುಗಿದಿದೆ. ಇದೀಗ ‘ಹರಿಜನ’ ಪದ ಬಳಕೆ ಸರಿಯೇ ತಪ್ಪೇ ಎಂಬ ಕುರಿತ ಜಿಜ್ಞಾಸೆ.
‘ಹರಿಜನ’ ಪದ ಬಳಕೆಯ ಬಗ್ಗೆ ಸಮಗ್ರವಾದ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆಯಲ್ಲಿ ಇಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.