ಗುವಾಹಟಿ, ಡಿ. 30 (ಪಿಟಿಐ)– ದೆಹಲಿಗೆ ತೆರಳುತ್ತಿದ್ದ ಬ್ರಹ್ಮಪುತ್ರ ಮೇಲ್ ರೈಲಿನಲ್ಲಿ ಇಂದು ರಾತ್ರಿ ಶಕ್ತಿಶಾಲಿ ಬಾಂಬ್ ಸ್ಫೋಟಿಸಿ ಸುಮಾರು 300ಕ್ಕೂ ಹೆಚ್ಚು ಪ್ರಯಾಣಿಕರು ಸತ್ತ ಭೀಕರ ದುರ್ಘಟನೆ ಸಂಭವಿಸಿದೆ.
ರಾತ್ರಿ 7.30ಕ್ಕೆ ಕೊಕ್ರಜಾರ್ ಜಿಲ್ಲೆಯ ಶೇಷಪಾಣಿ ರೈಲು ನಿಲ್ದಾಣದ ಬಳಿ ಈ ಬಾಂಬ್ ಸ್ಫೋಟದ ದುರಂತ ಸಂಭವಿಸಿದೆ. ಮೂರು ಬೋಗಿಗಳು ಬಾಂಬ್ಗೆ ಸಿಕ್ಕು ಪೂರ್ಣ ನಾಶವಾಗಿದ್ದು, ಇತರ ಎರಡು ಬೋಗಿಗಳು ಹಳಿ ತಪ್ಪಿ ಉರುಳಿವೆ ಎಂದು ಮಧ್ಯರಾತ್ರಿ ಬಂದ ವರದಿಗಳು ತಿಳಿಸಿವೆ.
ದುರಂತದಲ್ಲಿ ನೂರಾರು ಪ್ರಯಾಣಿಕರಿಗೆ ಗಾಯಗಳಾಗಿವೆ. ಇದು ಬೋಡೋ ಉಗ್ರಗಾಮಿಗಳ ಕೃತ್ಯ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ರಾಜೀವ್ ಹತ್ಯೆ ಪ್ರಕರಣ ವಿಚಾರಣೆ ಮರು ಆರಂಭ
ಚೆನ್ನೈ, ಡಿ. 30 (ಯುಎನ್ಐ)– ಐದು ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸದಾಗಿ ನೇಮಕವಾಗಿರುವ ನ್ಯಾಯಾಧೀಶರು ಇಂದು ತಮ್ಮ ಮೊದಲ ವಿಚಾರಣಾ ಸಭೆ ನಡೆಸುವುದರೊಂದಿಗೆ ಈ ಪ್ರಕರಣ ಈಗ ಕೊನೆಯ ಘಟ್ಟಕ್ಕೆ ಬಂದಿದೆ.
ರಾಜೀವ್ ಹತ್ಯೆ ಪ್ರಕರಣದ ವಿಚಾರಣಾ ಅಧಿಕಾರಿಯಾಗಿದ್ದ ನ್ಯಾಯಮೂರ್ತಿ ಎಸ್.ಎಂ.ಸಿದ್ದಿಕ್ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರಿಂದ ಆ ಸ್ಥಾನಕ್ಕೆ ಮದ್ರಾಸ್ ಹೈಕೋರ್ಟ್ನ ಅಡಿಷನಲ್ ರಿಜಿಸ್ಟ್ರಾರ್ ಆಗಿದ್ದ ನವನೀತಂ ಈಗ ಹೊಸ ವಿಚಾರಣಾ ಅಧಿಕಾರಿ.