ಗುರುವಾರ ಸಂಜೆ ನಗರದ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಹಠಾತ್ತನೆ ಒಂದು ದೃಶ್ಯ ಹೃದಯಸ್ಪರ್ಶಿ.
‘ಶತಮಾನಂ ಭವತಿ’ ಅಕ್ಷತೆ ಹಾಕುತ್ತ ಹೇಳಿದವರು ಕನ್ನಡದ ಆಚಾರ್ಯರಾದ ಶ್ರೀ ಡಿ.ವಿ. ಗುಂಡಪ್ಪ ಹಾಗೂ ಮಾಸ್ತಿ ವೆಂಟಕೇಶ ಅಯ್ಯಂಗಾರ್.
60 ತುಂಬಿದ ಚಿರಂಜೀವಿ ‘ಕರ್ನಾಟಕ’ದ ರತ್ನ ಕೃತಜ್ಞತೆಯಿಂದ ಕುಗ್ಗಿ ತಲೆ ಬಾಗಿ ವಟುವಿನಂತೆ ಕುಳಿತಿದ್ದರು.
ನೆರೆದಿದ್ದ ಸಾಹಿತಿಗಳ, ಸಾಹಿತ್ಯಾಭಿಮಾನಿಗಳ ಭಾರಿ ಸಭೆಯೂ ಭಾವಪರವಶವಾಗಿ ಕರತಾಡನ ಮಾಡಿ ಶ್ರೀ ಜಿ.ಪಿ. ರಾಜರತ್ನಂ ಅವರಿಗೆ ಆಶೀರ್ವಾದ ಮಾಡಿತು.
ಪ್ರಭಾವಪೀಡಿತ ಕೇಂದ್ರದಿಂದ ತನಿಖೆ ವಿಳಂಬ
ನವದೆಹಲಿ, ಡಿ. 5– ಬಿರ್ಲಾ ತಂಡದ ಸಂಸ್ಥೆಗಳ ವಿರುದ್ಧ ಮಾಡಲಾದ ಆಪಾದನೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ರಾಜ್ಯ ಸಭೆಯಲ್ಲಿ ಇಂದು ಕೆಲವು ಕಾಂಗ್ರೆಸ್ ಸದಸ್ಯರು ಹಾಗೂ ವಾಮಪಂಥೀಯ ವಿರೋಧ ಪಕ್ಷಗಳ ಸದಸ್ಯರು ಕಳವಳ ವ್ಯಕ್ತಪಡಿಸಿದರು.
ಬಿರ್ಲಾ ಸಂಸ್ಥೆಗಳ ಬಗ್ಗೆ ಕೆಲವು ಆಪಾದನೆಗಳನ್ನು ಮಾಡಿ ಚಂದ್ರಶೇಖರ್ (ಕಾಂ) ಅವರು ಪ್ರಧಾನಿಗೆ ಮನವಿ ಸಲ್ಲಿಸಿ 20 ತಿಂಗಳಾದರೂ ತನಿಖೆ ನಡೆಸಬೇಕೆಂಬ ಬೇಡಿಕೆಯ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸದಸ್ಯರು ಕುಪಿತರಾದರು.