ಬೆಂಗಳೂರು, ನ. 11– ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿವಿಧ ದೇಶಗಳ 88 ಚೆಲುವೆಯರು ಸೋಮವಾರ ಮಧ್ಯರಾತ್ರಿ ನಗರಕ್ಕೆ ಆಗಮಿಸಿದರು. ಇದರೊಂದಿಗೆ ನಗರವು ವಿಶ್ವ ಎದುರು ನೋಡುತ್ತಿರುವ ಮಹಾನ್ ಸ್ಪರ್ಧೆಗೆ ಸಜ್ಜಾಯಿತು.
ಸ್ಪರ್ಧೆಗೆ ಪೂರ್ವಭಾವಿಯಾಗಿ ನಡೆದ ಈಜುಡುಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸೀಷೆಲ್ಸ್ ದ್ವೀಪಕ್ಕೆ ತೆರಳಿದ್ದ ಎಲ್ಲ ಸ್ಪರ್ಧಿಗಳು ಇಂಡಿಯನ್ ಏರ್ಲೈನ್ಸ್ ಸಂಸ್ಥೆಯ ವಿಶೇಷ ವಿಮಾನದಲ್ಲಿ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ನಾಲ್ಕು ಹವಾನಿಯಂತ್ರಿತ ಬಸ್ಸುಗಳಲ್ಲಿ ಅವರನ್ನು ವಿಂಡ್ಸರ್ ಮ್ಯಾನರ್ ಹೋಟೆಲ್ಗೆ ಕರೆದೊಯ್ಯಲಾಯಿತು.
ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸುಂದರಿಯರು ಆಗಮಿಸುವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
‘ರಂಗ ಸರ್ಕಾರಕ್ಕೆ ಶೀಘ್ರವೇ ಕಾಂಗ್ರೆಸ್’
ಹುಬ್ಬಳ್ಳಿ, ನ. 11– ‘ಯಾರು ಏನೇ ಹೇಳಿದರೂ ರಾಷ್ಟ್ರೀಯ ರಂಗ ಸರ್ಕಾರ ಪೂರ್ಣಾವಧಿವರೆಗೆ ಬಾಳುತ್ತದೆ. ಕಾಂಗ್ರೆಸ್ ಶೀಘ್ರದಲ್ಲೇ ರಂಗ ಸರ್ಕಾರ ಸೇರುವ ಸಾಧ್ಯತೆ ಇದೆಯೇ ಹೊರತು ಅದು ಬೆಂಬಲ ಹಿಂತೆಗೆಯುವ ಪ್ರಶ್ನೆಯೇ ಇಲ್ಲ’ ಎಂದು ಕೇಂದ್ರ ಸಂಪನ್ಮೂಲ ಸಚಿವ ಎಸ್.ಆರ್. ಬೊಮ್ಮಾಯಿ ಅವರು ಇಂದು ಇಲ್ಲಿ ಹೇಳಿದರು.