ವೀರಪ್ಪನ್ ಸವಾಲು ಎದುರಿಸಲುಸರ್ಕಾರ ಸಜ್ಜು ಮೈಸೂರು, ಆಗಸ್ಟ್ 17– ವೀರಪ್ಪನ್ ಕಡೆಯಿಂದ ಬಂದೆರಗಬಹುದಾದ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಆರ್. ರೋಷನ್ ಬೇಗ್ ಪ್ರಕಟಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ‘ವೀರಪ್ಪನ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ವೀರಪ್ಪನ್ ಮನವೊಲಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರದ ಕಡೆಯಿಂದ ಮತ್ತೊಬ್ಬ ಪ್ರತಿನಿಧಿಯನ್ನು ಪತ್ರದೊಂದಿಗೆ ಕಳಿಸಲಾಗಿದೆ’ ಎಂದು ಹೇಳಿದರು.
‘ಅಮೃತಸರ ಭೇಟಿ ಬೇಡ’: ಬ್ರಿಟನ್ ರಾಣಿಗೆ ಒತ್ತಾಯ ಲಂಡನ್, ಆಗಸ್ಟ್ 17 (ಪಿಟಿಐ): ಸಿಖ್ಖರ ಪವಿತ್ರ ಸ್ಥಳವಾದ ಅಮೃತಸರಕ್ಕೆ ಭೇಟಿ ನೀಡುವ ಉದ್ದೇಶವನ್ನು ಕೈ ಬಿಡಬೇಕೆಂದು ಬ್ರಿಟನ್ನಿನ ರಾಣಿ ಎಲಿಜಬೆತ್ ಅವರನ್ನು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಒತ್ತಾಯಿಸಿದ್ದಾರೆ.
ಅಮೃತಸರದ ಬಳಿಯ ಜಲಿಯನ್ ವಾಲಾಬಾಗ್ನಲ್ಲಿ (1919) ಬ್ರಿಟಿಷ್ ಸೈನ್ಯ ಭಾರತೀಯರನ್ನು ಸಾಮೂಹಿಕವಾಗಿ ಮಾರಣಹೋಮ ಮಾಡಿತ್ತು. ಬ್ರಿಟನ್ನಿನ ರಾಣಿ ಇದಕ್ಕಾಗಿ ಕ್ಷಮೆ ಕೋರುವರೆಂದು ಅನೇಕ ಭಾರತೀಯರು ನಿರೀಕ್ಷಿಸಿದ್ದಾರೆಂದು ‘ಸಂಡೆ ಅಬ್ಸರ್ವರ್’ ಪತ್ರಿಕೆ ವರದಿಮಾಡಿದೆ.
ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಅಮೃತಸರಕ್ಕೆ ಆಕೆ ಭೇಟಿ ನೀಡದಿರುವುದು ಒಳ್ಳೆಯದು ಎಂದು ಬ್ರಿಟನ್ ಸರ್ಕಾರಕ್ಕೆ ಗುಜ್ರಾಲ್ ತಿಳಿಸಿರುವುದಾಗಿ ಪತ್ರಿಕೆ ಪ್ರಕಟಿಸಿದೆ.