ಈ ವರ್ಷದಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆ: ಪ್ರಥಮ ಹಂತಕ್ಕಾಗಿ 72 ಕೋಟಿ ರೂ. ವೆಚ್ಚ
ಬೆಂಗಳೂರು, ಜೂ. 28– ‘ಏನೇ ಆದರೂ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈ ವರ್ಷ ಆರಂಭಿಸಿಯೇ ಬಿಡಬೇಕು’ ಎಂದು ಪಣತೊಟ್ಟಿರುವ ರಾಜ್ಯ ಸರಕಾರವು, 72 ಕೋಟಿ ರೂಪಾಯಿಗಳ ವೆಚ್ಚ ಬರುವ ಯೋಜನೆಯ ಪ್ರಥಮ ಹಂತದ ಕೆಲಸಕ್ಕಾಗಿ ಕೇಂದ್ರ ಸರ್ಕಾರದೊಡನೆ ಹಣ ಸಹಾಯಕ್ಕಾಗಿ ತುರ್ತು ಮನವಿ ಸಲ್ಲಿಸಿದೆ.
ಸೋಮವಾರದಿಂದ ಮನಿಯಾರ್ಡರ್ ಫಾರಂ ಬೆಲೆ ಐದು ಪೈಸೆ
ನವದೆಹಲಿ, ಜೂ. 28– ಜುಲೈ ಒಂದರಿಂದ ಮನಿಯಾರ್ಡರ್ ಫಾರಂ ಬೆಲೆ ಮೂರು ಪೈಸೆಯಿಂದ ಐದು ಪೈಸೆಗೆ ಏರಲಿದೆ.
ಕಾಶ್ಮೀರದ ಕದನ ವಿರಾಮ ರೇಖೆ ಅಂತರ್ರಾಷ್ಟ್ರ ಗಡಿ ಅಲ್ಲ: ಅರ್ಷದ್ ಹುಸೇನ್
ರಾವಲ್ಪಿಂಡಿ, ಜೂ. 28– ಏನೇ ಆದರೂ ಕಾಶ್ಮೀರದ ಕದನವಿರಾಮ ರೇಖೆಯನ್ನು ಅಂತರ್ರಾಷ್ಟ್ರ ಗಡಿಯೆಂದು ಪಾಕಿಸ್ತಾನ ಒಪ್ಪಿಕೊಳ್ಳುವುದಿಲ್ಲ ಎಂದು ವಿದೇಶಾಂಗ ಸಚಿವ ಅರ್ಷದ್ ಹುಸೇನ್ ಇಂದು ಇಲ್ಲಿ ಘೋಷಿಸಿದರು.
ಯೂರೋಪಿನ ವಲಸೆಗಾರರಿಗೆ ಅಮೆರಿಕದ ಬಾಗಿಲು ಬಂದ್
ಲಂಡನ್, ಜೂ. 28– ಸೋಮವಾರದಿಂದ ಎರಡು ವರ್ಷ ಅಥವಾ ಇನ್ನೂ ಹೆಚ್ಚು ಕಾಲ ಬ್ರಿಟನ್ ಮತ್ತು ಇತರ ಪಶ್ಚಿಮ ಐರೋಪ್ಯ ರಾಷ್ಟ್ರಗಳಿಂದ ವಲಸೆ ಬರುವ ವೈದ್ಯರು ವಿಜ್ಞಾನಿಗಳು ಮತ್ತು ತಜ್ಞರಿಗೆ ಅಮೆರಿಕದಲ್ಲಿ ಪ್ರವೇಶವಿಲ್ಲ.
ವಲಸಿಗರ ಪ್ರಮಾಣವನ್ನು ಮಿತಗೊಳಿಸುವ ಅಮೆರಿಕದ 1965ರ ವಲಸೆ ಶಾಸನ ಭಾನುವಾರ ಮಧ್ಯ ರಾತ್ರಿಯಿಂದ ಜಾರಿಗೆ ಬರಲಿದೆ.
ಮಾಮೋ ವಾದಿಗಳಿಂದ ಸದ್ಯದಲ್ಲೇ ‘ಉರಿಗೆಂಪು’ ಕಮ್ಯುನಿಸ್ಟ್ ಪಕ್ಷದ ರಚನೆ
ನವದೆಹಲಿ, ಜೂ. 28– ‘ಉರಿಗೆಂಪು’ ಕಮ್ಯುನಿಸ್ಟ್ ಪಕ್ಷವೊಂದು ಸದ್ಯದಲ್ಲೇ ಉದಯವಾಗಲಿದೆ. ಈ ಬಗ್ಗೆ ವಿಜಯವಾಡದಿಂದ ಅಥವಾ ಕಲ್ಕತ್ತದಿಂದ ಅತಿ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ.