67–68 ರಲ್ಲಿ ರಾಜ್ಯದ ಯೋಜನೆ ವೆಚ್ಚ 62.5 ಕೋಟಿ ರೂ.
ಬೆಂಗಳೂರು, ಮಾ. 3– ನಾಡಿನ ಸಾಧನ ಮೂಲಗಳನ್ನು ಕೂಲಂಕಷವಾಗಿ ಪರಿಶೀಲಿ ಸಿದ ನಂತರ ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಬಗ್ಗೆ ಅಂತ್ಯ ನಿರ್ಧಾರ ಮೇ ತಿಂಗಳ ವೇಳೆಗೆ ಆಗುವ ನಿರೀಕ್ಷೆ ಇದ್ದು, ಈ ಮಧ್ಯೆ ಪ್ರಕೃತ ಸಾಲಿನಲ್ಲಿ 62.5 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆಯೆಂದು ಗೊತ್ತಾಗಿದೆ. ಈ ವೆಚ್ಚದಲ್ಲಿ 34 ಕೋಟಿ ರೂ. ನಷ್ಟು ಕೇಂದ್ರದ ನೆರವು ಸಿಕ್ಕುವ ಸಂಭವವಿದೆ.
ಮಹಿಳೆಯರೇ ಇಲ್ಲದ ವಿಧಾನಸಭೆ
ಶ್ರೀನಗರ, ಮಾ. 3– ಜಮ್ಮು ಮತ್ತು ಕಾಶ್ಮೀರದ ಹೊಸ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಹಿಂದಿನ ಎರಡೂ ವಿಧಾನಸಭೆಗಳಲ್ಲೂ ಮಹಿಳೆಯರಿರಲಿಲ್ಲ.
ಮೂರನೇ ಲೋಕಸಭೆ ವಿಸರ್ಜನೆ
ನವದೆಹಲಿ, ಮಾ. 3– ಮೂರನೆಯ ಲೋಕಸಭೆಯು ವಿಸರ್ಜನೆಯಾಯಿತು. ನಾಮಮಾತ್ರ ಅಧಿವೇಶನಕ್ಕೆ ಈ ಮುನ್ನ ನೀಡಲಾಗಿದ್ದ ಕರೆಯನ್ನು ರದ್ದುಪಡಿಸಿದ ಬಳಿಕ ರಾಷ್ಟ್ರಪತಿಗಳು ಸಭೆಯ ವಿಸರ್ಜನೆಗೆ ಇಂದು ಆಜ್ಞೆ ಮಾಡಿದರು. ಮಾರ್ಚಿ 16 ರಂದು ಸೇರಲಿರುವ ಹೊಸ ಲೋಕಸಭೆಯ ರಚನೆ ಕುರಿತು ಚುನಾವಣಾ ಆಯೋಗವು ನಾಳೆ ಪ್ರಕಟಣೆ ಹೊರಡಿಸುವುದು.
ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲು ಕಾಮರಾಜ್ ಒಪ್ಪಿಗೆ
ನವದೆಹಲಿ, ಮಾ. 3– ಕಾಂಗ್ರೆಸ್ ಹೈಕಮಾಂಡ್ನಲ್ಲಿರುವ ತಮ್ಮ ನಿಕಟ ವರ್ತಿಗಳ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಒಪ್ಪಿದ್ದಾರೆ. ಶ್ರೀ ಕಾಮರಾಜರ ಅಧಿಕಾರಾವಧಿ ಡಿಸೆಂಬರ್ನಲ್ಲಿ ಪೂರ್ಣಗೊಳ್ಳುತ್ತದೆ.
ಸೆಟಲ್ವಾಡ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲು ಸಲಹೆ
ಬೆಂಗಳೂರು, ಮಾ. 3– ಮಾಜಿ ಅಟಾರ್ನಿ ಜನರಲ್ ಶ್ರೀ ಎಂ.ಸಿ. ಸೆಟಲ್ವಾಡ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕೆಂದು ನಗರದ ನೂರಕ್ಕೂ ಹೆಚ್ಚು ವಕೀಲರು ಸಲಹೆ ಮಾಡಿದ್ದಾರೆ.