ಅಧಿಕಾರ ಚಲಾಯಿಸಿದವರಿಗೆ ಅಧಿಕಾರ ಬಿಟ್ಟುಕೊಡುವುದನ್ನೂ ಪ್ರಜಾಪ್ರಭುತ್ವ ಮೊದಲು ಕಲಿಸಿಕೊಡುತ್ತದೆ. ಒಂದೊಮ್ಮೆ ಸದಸ್ಯರಾಗಿ ನಿರಂತರ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಳ್ಳುವುದು ಸಹಜ. ಸೋತಾಗ ಕೊರಗುವುದು, ಗೆದ್ದಾಗ ಹಿಗ್ಗುವುದು ಮನುಷ್ಯನ ಗುಣ. ಆದರೆ ಒಬ್ಬ ವ್ಯಕ್ತಿಯೇ ನಿರಂತರವಾಗಿ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವದ ಪದ್ಧತಿಯಲ್ಲ. ಹೀಗಾಗಿ ಚುನಾವಣೆಯಲ್ಲಿ ಸೋಲಿನಿಂದ ಯಾರೂ ಕಂಗೆಡಬಾರದು. ಜನ ಯಾವುದನ್ನು ಒಪ್ಪಿಕೊಂಡರು ಎಂಬುದನ್ನು ಮೊದಲು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸೋಲಿನಲ್ಲಿ ಇಷ್ಟೊಂದು ಅಂತರ ಹೇಗೆ ಬಂತು ಎಂಬುದರ ವಿಶ್ಲೇಷಣೆಯ ಜೊತೆಗೆ ಮುಂದಿನ ಹೆಜ್ಜೆಗಳ ಬಗೆಗೆ ಚಿಂತನೆ ನಡೆಸಬೇಕು. ಅಲ್ಲದೆ ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸಿದ್ದರೆ ರಾಜಕೀಯವೇ ಯಾಕೆ ಬೇಕು? ರಾಜಕೀಯ ಮಾರ್ಗ ಸರಿಯಾಗುತ್ತಿಲ್ಲ ಅನಿಸಿದಾಗ ಸಮಾಜಸೇವೆಯ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬಹುದು.