ವಿಶ್ವಭಾರತಿಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ‘ಆತ್ಮನಿರ್ಭರ’ ಕಾರ್ಯಕ್ರಮದ ಮೂಲ ರವೀಂದ್ರನಾಥ ಟ್ಯಾಗೋರರ ವಿಚಾರಗಳಿಂದ ಬಂದಿದೆ ಎಂದರು. ನಿಜ ಹೇಳಬೇಕೆಂದರೆ, ಟ್ಯಾಗೋರರಿಗೆ ‘ದೇಶಪ್ರೇಮ’ ಎಂಬ ಕಲ್ಪನೆಯ ಬಗೆಗೇ ಸಂದೇಹಗಳಿದ್ದವು. ಮನಸ್ಸು ನಿಜ ಅರ್ಥದಲ್ಲಿ ಸ್ವತಂತ್ರವಾಗಿರಲು ಧರ್ಮ, ಜಾತಿಗಳಂತೆ ಭೌಗೋಳಿಕ ಗಡಿಗಳೂ ಅಡ್ಡಿ ಎಂದು ತಮ್ಮ ಕೊನೆಯ ಭಾಷಣಗಳೊಂದರಲ್ಲಿ ಪ್ರತಿಪಾದಿಸಿದ್ದರು. ಅವರು ಕಸುಬುಗಳಿಗಾಗಿ ಸ್ಥಾಪಿಸಿದ ಶ್ರೀನಿಕೇತನವು ಕೌಶಲಗಳನ್ನು ಸಂರಕ್ಷಿಸುವ, ಬೆಳೆಸುವ ಉದ್ದೇಶ ಹೊಂದಿತ್ತು. ಒಟ್ಟಾರೆಯಾಗಿ ಗುರುದೇವರಿಗೆ ಭಾರತವು ವಿಶ್ವದ ಗುರು ಆಗಬೇಕು ಎಂದೇನೂ ಇರಲಿಲ್ಲ, ‘ವೋಕಲ್ ಫಾರ್ ಲೋಕಲ್’ ಶೈಲಿಯ ಪ್ರಚಾರಪ್ರಿಯತೆಯಿಂದ ಅವರು ದೂರವಿದ್ದರು.