ಕಳೆದ ಕೆಲವು ತಿಂಗಳುಗಳಿಂದ ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ನಾನು ಅರ್ಜಿಸಲ್ಲಿಸಿ, ಸ್ವತಃ ಹಾಜರಾಗಿ ನನ್ನ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ ವೇದಿಕೆಯ ಕಲಾಪದಲ್ಲಿ ಭಾಗವಹಿಸಿದಾಗ, ವೇದಿಕೆಯ ಅಧ್ಯಕ್ಷರು, ‘ಇನ್ನು ಮುಂದೆ ಗ್ರಾಹಕರು ನೇರವಾಗಿ ವೇದಿಕೆಯ ಕಲಾಪ ದಲ್ಲಿ ಭಾಗವಹಿಸುವಂತಿಲ್ಲ. ಅವರು ವಕೀಲರ ಮೂಲಕವೇ ಬರಬೇಕು’ ಎಂದು ಹೇಳಿದರು. ಜೊತೆಗೆ ‘ಇದನ್ನು ನಾನು ಹೇಳುತ್ತಿಲ್ಲ, ಕಾನೂನೇ ಹಾಗೆ ಹೇಳುತ್ತದೆ’ ಎಂದರು. ಆ ಕುರಿತು ನಾನು ಹಲವು ವಕೀಲರು ಹಾಗೂ ಗ್ರಾಹಕರ ಸಹಾಯವಾಣಿಯನ್ನು ಸಂಪರ್ಕಿಸಿದೆ. ಎಲ್ಲಿಂದಲೂ ನಿಶ್ಚಿತವಾದ ಉತ್ತರ ದೊರೆಯಲಿಲ್ಲ. ಹಾಗೇನಿಲ್ಲ ಎಂದು ಕೆಲವರೆಂದರೆ, ನ್ಯಾಯಾಧೀಶರು ಹೇಳಿದ್ದಾರೆಂದರೆ ಇದ್ದರೂ ಇರಬಹುದು ಎಂದರು ಇನ್ನು ಕೆಲವರು. ಗ್ರಾಹಕರ ನೇರ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸುವಂಥ ಕಾನೂನೇನಾದರೂ ಜಾರಿಯಾಗಿದ್ದರೆ, ಅದು ನಿಜಕ್ಕೂ ದುರದೃಷ್ಟಕರ.