ಹಿಂದೆ, ಕನ್ನಡ ತಿಳಿಯದ ರಾಜ್ಯಪಾಲರು ಸೌಜನ್ಯಕ್ಕಾಗಿಯಾದರೂ ಕೆಲವು ವಾಕ್ಯಗಳನ್ನು ಕನ್ನಡದಲ್ಲಿ ಓದಿದ ನಂತರ ಪರಭಾಷೆಯಲ್ಲಿ ಓದುತ್ತಿದ್ದರು. ಈಗಿರುವ ರಾಜ್ಯಪಾಲರು ಇಲ್ಲಿಗೆ ಬಂದು ವರ್ಷಗಳೇ ಕಳೆದಿದ್ದರೂ ಕನ್ನಡವನ್ನು ಕಲಿಯುವ ಆಸಕ್ತಿಯನ್ನೇ ತೋರಿಸದಿರುವುದು ವಿಷಾದನೀಯ. ಜೈಲಿನಲ್ಲಿದ್ದ ಶಶಿಕಲಾ ಕನ್ನಡ ಕಲಿತರು. ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರು ಜೈಲಿನಲ್ಲಿದ್ದ ಎಲ್.ಕೆ.ಅಡ್ವಾಣಿ, ಬಳ್ಳಾರಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಸ್ವಲ್ಪಮಟ್ಟಿಗಾದರೂ ಕನ್ನಡವನ್ನು ಕಲಿತಿದ್ದರು. ವಿರೋಧವಿದ್ದರೂ ಹಿಂದಿ ಹೇರುವುದು ಸರ್ವಾಧಿಕಾರಿ ನೀತಿಯಲ್ಲವೇ? ಹೀಗೆ ವರ್ತಿಸಿದರೆ ಹಿಂದಿ ಬಗ್ಗೆ ಪ್ರೀತಿ ಮೂಡುತ್ತದೆಯೇ?