ಒಬ್ಬ ಮಹಾನ್ ವ್ಯಕ್ತಿ ತೀರಿಕೊಂಡಾಗ ಅವರನ್ನು ನೆನಪಿಸಿಕೊಳ್ಳುವ ಕೆಲಸ ಬರೀ ಟೊಳ್ಳು ಮಾತುಗಳ ಮೂಲಕ ಮತ್ತು ರಜೆ ನೀಡುವ ಮೂಲಕ ಆಗಬಾರದು. ಅದಕ್ಕೆ ಬದಲಾಗಿ, ಆ ದಿನ ಶಾಲಾ– ಕಾಲೇಜುಗಳಲ್ಲಿ ಅವರ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು, ಅವರ ಜೀವನದ ಸಾಕ್ಷ್ಯಚಿತ್ರ ತೋರಿಸುವುದು, ಅವರ ಕೃತಿಗಳ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸುವುದು ಸೂಕ್ತ. ಸರ್ಕಾರಿ ಕಚೇರಿಗಳಲ್ಲಿ ಸ್ಮರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸುವುದು, ಅವರ ಪ್ರಶಸ್ತಿ ಪುರಸ್ಕೃತ ಕೃತಿಯ ವಾಚನ ಮಾಡುವುದು ಬೌದ್ಧಿಕವಾಗಿಯೂ, ಭಾವನಾತ್ಮಕವಾಗಿಯೂ ಒಳ್ಳೆಯ ಕೆಲಸ. ಅದು ಬಿಟ್ಟು ರಜೆ ನೀಡಿ, ಒಬ್ಬ ಮಹಾನ್ ಸಾಹಿತಿಯ ಹೆಸರಿನಲ್ಲಿ ಒಂದು ದಿನ ಪೋಲು ಮಾಡಲು ಲಕ್ಷಾಂತರ ಜನರಿಗೆ ಅವಕಾಶ ಮಾಡಿಕೊಟ್ಟದ್ದು ಸರ್ಕಾರದ ಅತಾರ್ಕಿಕ ನಿರ್ಧಾರ.