ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ಹಾಗೂ ಡೆಂಗಿ ರೋಗಗಳು ಉಲ್ಬಣಿಸಿವೆ. ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಜನರು ಭೀತಿಯಿಂದ ದಿನ ಕಳೆಯುವಂತಾಗಿದೆ. ಕೊಳಚೆ ಪ್ರದೇಶ, ತೆರೆದ ಒಳಚರಂಡಿ, ಸೊಳ್ಳೆ ಉತ್ಪತ್ತಿ ಸ್ಥಳಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು ಈ ರೋಗಗಳು ವ್ಯಾಪಕವಾಗಿ ಹರಡಲು ಕಾರಣವಾಗಿದೆ. ಜನರ ಆರೋಗ್ಯ ಕಾಪಾಡಲು ಇನ್ನಾದರೂ ಜಿಲ್ಲಾಡಳಿತಗಳು ಸಮರ್ಪಕ ಕಾರ್ಯಯೋಜನೆಯನ್ನು ರೂಪಿಸಿ ಕಾರ್ಯಪ್ರವೃತ್ತವಾಗಬೇಕು. ಆರೋಗ್ಯ ಇಲಾಖೆಯು ಸೊಳ್ಳೆ ನಾಶಕ್ಕೆ ಫಾಗಿಂಗ್, ಕ್ರಿಮಿನಾಶಕ ಸಿಂಪಡಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಭೆ ನಡೆಸುವುದು, ಬ್ಯಾನರ್ ಹಾಕುವುದು, ಅಭಿಯಾನ ಮಾಡುವುದರ ಮುಖಾಂತರ ಜನಜಾಗೃತಿ ಮೂಡಿಸಬೇಕು. ರೋಗದ ಮೂಲವನ್ನು ಪತ್ತೆ ಹಚ್ಚಿ, ಅದನ್ನು ನಾಶಪಡಿಸಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು.