ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮೇಲೆ ಹೇರುವ ಆಗ್ರಹಪೂರ್ವಕ ಒತ್ತಾಯದ ಹಾದಿಯು ಸಾತ್ವಿಕವಾಗಿರಬೇಕು ಎಂದು ಯೋಗಾನಂದ ಅವರು ಆಶಿಸಿದ್ದಾರೆ (ಸಂಗತ, ಸೆ. 30). ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ನಮ್ಮಲ್ಲಿ ನಡೆದಿರುವ ಚಳವಳಿಗಳಲ್ಲಿ ಸಾತ್ವಿಕ ಅಂಶ ಶೂನ್ಯ ಎನ್ನುವುದು ಸತ್ಯ ಸಂಗತಿ. ಬಹುಮತ ಪಡೆದು ಆಡಳಿತಕ್ಕೆ ಬಂದ ಪಕ್ಷವೊಂದು ತಾನು ಜಾರಿ ಮಾಡುವ ಕಾಯ್ದೆ, ನಿಯಮಗಳು ಜನಪರ ಎಂದೇ ತಿಳಿಯುತ್ತದೆ. ಬಂದ್ ಆಯೋಜಕರು ಮತ್ತು ಇದನ್ನು ಸಮರ್ಥಿಸುವವರು ಸರ್ಕಾರದ ಕ್ರಮದ ವಿರುದ್ಧ ವ್ಯಕ್ತವಾಗುವ ಪ್ರತಿಭಟನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ತಮ್ಮ ಹಕ್ಕು ಸ್ಥಾಪಿಸಲು ಮುಂದಾಗುತ್ತಾರೆ. ತಮಾಷೆ ಎಂದರೆ, ಸದ್ಯ ವಿರೋಧ ಪಕ್ಷದಲ್ಲಿ ಇರುವವರೇ ತಾವು ಆಡಳಿತದಲ್ಲಿದ್ದಾಗ ಬಂದ್ಗಳನ್ನು ದೂಷಿಸುತ್ತಿದ್ದವರು!