ಡಬ್ಬಿಂಗ್ ಧಾರಾವಾಹಿಗಳಲ್ಲಿ ಈ ನೆಲದ ಸೊಗಡು ಇಲ್ಲದಿರುವುದರಿಂದ, ಸೃಜನಾತ್ಮಕತೆ ಮತ್ತು ಕನ್ನಡದ ಸಂಸ್ಕೃತಿಗೆ ಅಪಾಯ ಉಂಟಾಗುತ್ತದೆ; ಹೀಗಾಗಿ, ಇದರ ವಿರುದ್ಧ ದನಿ ಎತ್ತಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜುಲೈ 18). ಆದರೆ ಈ ಧಾರಾವಾಹಿಗಳ ವೀಕ್ಷಕಳಾಗಿ ನಾನಿದನ್ನು ಒಪ್ಪುವುದಿಲ್ಲ. ಇಂತಹ ಡಬ್ಬಿಂಗ್ ಧಾರಾವಾಹಿಗಳಿಂದ ವೀಕ್ಷಕರಿಗೆ ಕಿರಿಕಿರಿ ಆಗಿದ್ದಲ್ಲಿ ಅವು ಇಷ್ಟೊಂದು ಪ್ರಮಾಣದಲ್ಲಿ ಜನಪ್ರಿಯವಾಗುತ್ತಿರಲಿಲ್ಲ. ಇನ್ನು ಸ್ಥಳೀಯ ಸಂಸ್ಕೃತಿ, ನಂಬಿಕೆ, ಸಂಪ್ರದಾಯಗಳನ್ನು ಅಪ್ಪಟ ಕನ್ನಡದ ಧಾರಾವಾಹಿಗಳಲ್ಲೂ ನಾವಿಂದು ಕಾಣಲಾರೆವು. ನಮ್ಮ ಸಂಸ್ಕೃತಿ, ನೆಲದ ಸೊಗಡನ್ನು ಕಟ್ಟಿಕೊಡುವಲ್ಲಿ ಇಂದಿನ ಧಾರಾವಾಹಿಗಳು ಸೋತಿವೆ. ಬದಲಾಗಿ, ಸತ್ಯಕ್ಕೆ ದೂರವಾದ, ನಿಜ ಜೀವನದಲ್ಲಿ ಕಂಡುಕೇಳರಿಯದ ಅಸಂಬದ್ಧ ಕಥೆಗಳನ್ನು ಹೆಣೆದು ವೀಕ್ಷಕರ ಮುಂದಿಡುತ್ತಿವೆ. ದ್ವೇಷ, ಸೇಡು, ಹಿಂಸೆ, ಕ್ರೌರ್ಯ ತುಂಬಿ ತುಳುಕುವ ಇಂತಹ ಧಾರಾವಾಹಿಗಳಿಗಿಂತ ಮಾಲ್ಗುಡಿ ಡೇಸ್, ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್, ಮಹಾಭಾರತದಂಥ ಚಂದದ ಧಾರಾವಾಹಿಗಳಕನ್ನಡ ರೂಪಾಂತರ ನೋಡಲು ಸಿಕ್ಕಿರುವುದರಿಂದ, ಹಿಂದಿ ಬಾರದ ಅನೇಕ ವೀಕ್ಷಕರಿಗೆ ಬಹಳ ಸಂತಸವಾಗಿದೆ.