ಹಾವೇರಿ ಜಿಲ್ಲೆಯ ಕುಣಿಮೆಳ್ಳಿ ಹಳ್ಳಿಯ ಶಾಲೆಯಲ್ಲಿ ಪ್ರವಾಹ ಸಂತ್ರಸ್ತರು ತಾತ್ಕಾಲಿಕ ವಾಸ್ತವ್ಯ ಪಡೆದಿರುವ ವಿಚಾರದಲ್ಲಿ ಕಲಿಕೆ ಹಾಗೂ ಮಾನವೀಯತೆ ನಡುವೆ ಸಂಘರ್ಷ ತಲೆದೋರಿರುವುದು (ಪ್ರ.ವಾ.,ಆ. 21) ಬೇಸರ ಉಂಟು ಮಾಡಿತು. ಪ್ರೀತಿ, ವಿಶ್ವಾಸ, ತ್ಯಾಗ, ಬಲಿದಾನ ಹಾಗೂ ದಾಸೋಹಕ್ಕೆ ಹೆಸರಾದ; ಶರಣರು, ದಾಸರು ಜನಿಸಿದ ಕನ್ನಡ ನಾಡಿಗೆ ಇಂತಹ ಬೆಳವಣಿಗೆ ಶೋಭೆ ತರುವಂತಹುದಲ್ಲ. ಸೂರಿಲ್ಲದೆ ಹೊತ್ತಿನ ಊಟಕ್ಕೂ ಸರ್ಕಾರದ ಮುಖ ನೋಡಬೇಕಾದವರ ಅಸಹಾಯಕ ಸ್ಥಿತಿಯನ್ನು ಆ ಊರಿನ ಜನ ಅರ್ಥ ಮಾಡಿಕೊಳ್ಳಬೇಕಿತ್ತು. ಸಂತ್ರಸ್ತರಿಗೆ ತಾಳ್ಮೆಯಿಂದ ಮನವರಿಕೆ ಮಾಡಿಕೊಟ್ಟು, ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದು, ಅವರಿಗೆ ಸೂಕ್ತ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ನೆರವಾಗಬೇಕಿತ್ತು. ಅದನ್ನು ಬಿಟ್ಟು, ‘ಸೂರಿಲ್ಲದಿದ್ದರೆ ಬೀದಿಯಲ್ಲಿ ಮಲಗಿ, ನಾವೇನೂ ಮಾಡಲಾಗದು’ ಎಂಬ ಮಾತು ಅಮಾನವೀಯ.