ಗೋವುಗಳನ್ನು ದತ್ತು ಪಡೆದು, ಪುಣ್ಯಕೋಟಿ ಯೋಜನೆ ಬೆಂಬಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ (ಪ್ರ.ವಾ., ಸೆ. 7). ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ, ರೈತರು ಮುದಿ ಹಸುಗಳನ್ನು ಮಾರಲಾಗದೆ, ಸಾಕಲೂ ಆಗದೆ ಗೋಶಾಲೆಗಳು ದೊಡ್ಡದಾಗಿವೆ. ಗೋವುಗಳನ್ನು ದತ್ತು ಪಡೆದು ನಗದು ರೂಪದಲ್ಲಿ ಹಣ ಕೊಟ್ಟರೂ ಅವುಗಳ ಹೊಟ್ಟೆ ತುಂಬುವ ಖಾತರಿಯಿಲ್ಲ. ಅದಕ್ಕೆ ಬದಲಾಗಿ, ಮುಖ್ಯಮಂತ್ರಿ ಕರೆಯನ್ನು ಸ್ವಲ್ಪ ಬದಲಾವಣೆ ಮಾಡಿ, ಒಬ್ಬೊಬ್ಬ ನೌಕರರಿಗೂ ಒಂದೊಂದು ಗೋವು ಹಿಡಿದುಕೊಡುವುದೇ ಸೂಕ್ತವಾಗಿದೆ. ಕಚೇರಿಗಳ ಮುಂದೆ ಕಟ್ಟಿ ಸಾಕಬಹುದು. ಖಾಲಿ ಕುರ್ಚಿಗಳನ್ನು ತೋರಿಸಿ ‘ಕಾಫಿಗೆ ಹೋಗಿದ್ದಾರೆ’ ಎಂದು ಹೇಳುವ ಬದಲು, ‘ಹುಲ್ಲು ಹಾಕಲು, ನೀರಿಡಲು ಹೋಗಿದ್ದಾರೆ’ ಎಂದು ಧ್ವನಿ ಬದಲಿಸಬಹುದು.