ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಯಲ್ಲಿ ಸಂದರ್ಶನದ ಅಂಕಗಳನ್ನು ಕಡಿತಗೊಳಿಸಿರುವ ಸರ್ಕಾರದ ಕ್ರಮದಿಂದ ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಇತ್ತೀಚೆಗೆ ಉಭಯ ಸದನಗಳ ಕಲಾಪಗಳ ಚರ್ಚೆಯಲ್ಲಿ ಕೆಲವು ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅನಗತ್ಯ ಆತಂಕವಾಗಿದೆ. ಸರ್ಕಾರದ ಈ ಕ್ರಮವು ಪ್ರತಿಭಾವಂತ, ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಅಭ್ಯರ್ಥಿಗಳ ಆಯ್ಕೆಗೆ ಪೂರಕವಾಗಿ ಇದೆ. ಸಂದರ್ಶನಕ್ಕೆ ಹೆಚ್ಚಿನ ಅಂಕಗಳು ಇದ್ದಾಗ ಭ್ರಷ್ಟಾಚಾರಕ್ಕೆ ಹೆಚ್ಚಿನ ಅವಕಾಶವಿರುತ್ತದೆ. ಅಲ್ಲದೆ, ಮೆರಿಟ್ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾದ ಆರೋಪಗಳು ಹಿಂದಿನ ನೇಮಕಾತಿಯಲ್ಲಿ ಕೇಳಿಬಂದಿವೆ. ಸರ್ಕಾರವು ಯಾವುದೇ ಒತ್ತಡಕ್ಕೆ ಮಣಿಯದೆ, ಈ ದಿಟ್ಟ ಕ್ರಮವನ್ನು ಮುಂದಿನ ನೇಮಕಾತಿಗಳಲ್ಲಿ ಅಳವಡಿಸಬೇಕು.