ನಾಡಿನ ಎಲ್ಲಾ ಸುದ್ದಿ ವಾಹಿನಿಗಳು ನ. 24ರಿಂದ ನ.26ರ ತಡರಾತ್ರಿವರೆಗೂ ಚಿತ್ರನಟ ಅಂಬರೀಷ್ ಅವರ ನಿಧನ, ಅಂತ್ಯಸಂಸ್ಕಾರಗಳ ಸುದ್ದಿಯನ್ನೇ ಪ್ರಸಾರ ಮಾಡುತ್ತಾ ಬಂದವು.
ಭಾನುವಾರ (ನ. 25), ನಾಡಿನ ಪ್ರಖ್ಯಾತ ರಾಜಕಾರಣಿ ಸಿ.ಕೆ. ಜಾಫರ್ ಷರೀಫ್ ಅವರು ನಿಧನಹೊಂದಿದರೂ ಅಂಬರೀಷ್ ಸಾವಿನ ಸುದ್ದಿಯ ನಡುವೆ, ಷರೀಫ್ ಅವರನ್ನು ಕುರಿತ ಕಾರ್ಯಕ್ರಮ ಪ್ರಸಾರಕ್ಕೆ ವಾಹಿನಿಗಳವರಿಗೆ ಸಮಯಾವಕಾಶವೇ ಲಭಿಸಲಿಲ್ಲ.
ರೈಲ್ವೆ ಸಚಿವರಾಗಿ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಗಣನೀಯ ಕೊಡುಗೆ ನೀಡಿದ್ದ ಷರೀಫ್ ಅವರು ಸುದ್ದಿ ವಾಹಿನಿಗಳಿಗೇಕೆ ಅಮುಖ್ಯರಾದರು ಎಂಬುದು ಅರ್ಥವಾಗುತ್ತಿಲ್ಲ. ಅಂಬರೀಷ್ ಸಾವಿನ ಸುದ್ದಿಯ ನಡುನಡುವೆ ಆಗೊಮ್ಮೆ ಈಗೊಮ್ಮೆ ಎಂಬಂತೆ ಷರೀಫ್ ಅವರನ್ನು ಕುರಿತ ಕಾರ್ಯಕ್ರಮ ಪ್ರಸಾರವಾಗಿದ್ದರೆ ಏಕತಾನತೆಯಾದರೂ ತಪ್ಪುತ್ತಿತ್ತು. ಸುದ್ದಿಯ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಒದಗಿಸಬೇಕಾದ್ದು ಸುದ್ದಿ ವಾಹಿನಿಗಳ ಜವಾಬ್ದಾರಿ.
ಆದರೆ, ಇತರ ಎಲ್ಲವನ್ನೂ ಮರೆತು, ಅಂಬರೀಷ್ ಸಾವಿನ ಸುತ್ತವೇ ಮಾಧ್ಯಮಗಳು ಗಿರಕಿ ಹೊಡೆದದ್ದು ದುರಂತವೇ ಸರಿ. ಸುದ್ದಿ ವಾಹಿನಿಗಳು ಇನ್ನಾದರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬಲ್ಲವೇ?