ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಮಾರಾಟ ಮಾಡಬಹುದು ಎಂಬ ಉದ್ದೇಶದ ಎಪಿಎಂಸಿ– 2020 ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲೆ ನಮ್ಮ ರಾಜ್ಯದಲ್ಲಿ ಎಪಿಎಂಸಿಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಎಪಿಎಂಸಿಗಳಿಗೆ ಆವಕವಾಗುವ ಕೃಷಿ ಉತ್ಪನ್ನಗಳ ಪ್ರಮಾಣ 2020- 21ರಲ್ಲಿ ಸರಾಸರಿ ಶೇ 30ರಿಂದ 40ರಷ್ಟು ಕಡಿಮೆಯಾಗಿದೆ. ಎರಡನೆಯದಾಗಿ, ಎಪಿಎಂಸಿಗಳಲ್ಲಿ ವಹಿವಾಟು ಕಡಿಮೆಯಾಗುತ್ತಿರುವ ಕಾರಣದಿಂದ ತಮ್ಮ ಸಿಬ್ಬಂದಿಗೆ ಸಂಬಳ ನೀಡುವುದು ಅವಕ್ಕೆ ಕಷ್ಟವಾಗುತ್ತಿದೆ. ಮೂರನೆಯದಾಗಿ, ಎಪಿಎಂಸಿಗಳು ಮುಚ್ಚಿಹೋದರೆ ರೈತರು ಲಾಭಕೋರ ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಬೇಕಾಗುತ್ತದೆ ಮತ್ತು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಎಂಬುದು ಗಗನಕುಸುಮವಾಗಿ ಬಿಡುತ್ತದೆ.