ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಹಿಂದೊಮ್ಮೆ ತಮ್ಮ ಜಮೀನಿನ ಕಾಫಿಗೆ ಕಂದಾಯ ನಿಗದಿ ಮಾಡುವಂತೆ ಮೂಡಿಗೆರೆ ತಹಶೀಲ್ದಾರ್ ಅವರಿಗೆ ಅರ್ಜಿ ನೀಡಿದಾಗ, ಅರ್ಜಿಗೆ ಪೂರಕವಾಗಿ ಮ್ಯುಟೇಶನ್, ಪಹಣಿ, ಆಕಾರ್ ಬಂದ್ ಸಲ್ಲಿಸುವಂತೆ ಅವರು ತೇಜಸ್ವಿಯವರಿಗೆ ಹಿಂಬರಹ ನೀಡಿದ್ದರು. ಆಗ ತೇಜಸ್ವಿಯವರು ‘ತಹಶೀಲ್ದಾರ್ ಅವರೆ, ಮ್ಯುಟೇಶನ್, ಪಹಣಿ, ಆಕಾರ್ ಬಂದ್ ಎಲ್ಲ ಎಲ್ಲಿ ಸಿಗುತ್ತವೆ’ ಎಂದು ಪ್ರಶ್ನಿಸಿದರು. ತಹಶೀಲ್ದಾರ್ ಅವರು ‘ನಮ್ಮ ಕಚೇರಿಯಲ್ಲಿಯೇ’ ಎಂದರು. ‘ಎಲ್ಲ ದಾಖಲೆಗಳೂ ನಿಮ್ಮ ಕಚೇರಿಯಲ್ಲಿಯೇ ಸಿಗುವುದರಿಂದ ನಾವೇಕೆ ದಾಖಲೆಗಳನ್ನು ಲಗತ್ತಿಸಬೇಕು? ನೀವೇ ಅವುಗಳನ್ನು ಪಡೆದು ಕೆಲಸ ಮಾಡಿ ಹಾಗೂ ಈ ವಿಚಾರವಾಗಿ ಅನಗತ್ಯವಾಗಿ ಪತ್ರ ವ್ಯವಹಾರ ಮಾಡಬೇಡಿ’ ಎಂದು ಎಚ್ಚರಿಸಿದ್ದರು.