ಆರರಿಂದ ಎಂಟನೇ ತರಗತಿವರೆಗಿನ ಶಾಲೆಗಳನ್ನು ಕೂಡ ಸರ್ಕಾರ ಆರಂಭಿಸಬೇಕಿತ್ತು. ಗ್ರಾಮೀಣ ಮಕ್ಕಳು ಕಳೆದ ಒಂದು ವರ್ಷದ ಮೇಲೆ ಶಿಕ್ಷಣದಿಂದ ವಂಚಿತರೇ ಆದಂತಾಗಿದೆ. ಕೊರೊನಾ ಆತಂಕ ಒಂದೆಡೆ ಆದರೆ, ಮನೆ ಹಿಡಿದು ಕುಳಿತ ಅಥವಾ ಪಾಲಕರೊಂದಿಗೆ ಅನ್ಯ ಚಟುವಟಿಕೆಗಳಲ್ಲಿ ಅನಿವಾರ್ಯವಾಗಿ ತೊಡಗಿಕೊಳ್ಳುವಂತಾದ ಮಕ್ಕಳ ಸಂಕಷ್ಟ ಹೇಳತೀರದು. ಬೆಳೆಯಬೇಕಾದ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು ಆರರಿಂದ ಎಂಟನೆಯ ತರಗತಿಗಳನ್ನು ಕೂಡಲೇ ಆರಂಭಿಸಬೇಕು. ದೈಹಿಕ ಅಪೌಷ್ಟಿಕತೆ ಮತ್ತು ಮಾನಸಿಕ ಲವಲವಿಕೆ, ಆಟಪಾಠ ಇಲ್ಲದ ಮಕ್ಕಳು ಮತ್ತೊಂದು ರೀತಿಯ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದಾರೆ. ಪಾಠ ಪ್ರವಚನಗಳಿಲ್ಲದೆ ಮತ್ತು ಸರ್ಕಾರದ ಮೀನಮೇಷದ ನಡೆಯಿಂದ ಶಿಕ್ಷಕರು ಕೂಡ ನಿರುತ್ಸಾಹಗೊಂಡಿದ್ದಾರೆ. ಆದ್ದರಿಂದ ಕಿರಿಯ ಪ್ರಾಥಮಿಕ ಶಾಲೆಗಳ ಆರಂಭ ಕುರಿತು ಕೂಡ ಶೀಘ್ರ ಗಮನಹರಿಸಬೇಕು. ಕೊರೊನಾದೊಂದಿಗೆ ಏಗುತ್ತ, ಎಚ್ಚರಿಕೆ ವಹಿಸುತ್ತಲೇ ನಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರ ಕ್ರಮ ಕೈಗೊಳ್ಳುವುದು ಸೂಕ್ತ.