‘ಸಾಂಸ್ಕೃತಿಕ ಪಲ್ಲಟ ಹೊಂದುವರೇ?’ (ವಾ.ವಾ., ನ. 24) ಎಂಬ, ಶಿವಕುಮಾರ ಬಂಡೋಳಿ ಅವರ ಪತ್ರಕ್ಕೆ ಈ ಪ್ರತಿಕ್ರಿಯೆ. ‘ರೇವಣಸಿದ್ಧರು ಕುರುಬರ ಗುರು, ‘ಶಿವ’ ಇವರ ಆರಾಧ್ಯ ದೈವ ಮತ್ತು ಇವರ ಸಂಸ್ಕೃತಿ ಲಿಂಗಾಯತ ಸಂಸ್ಕೃತಿಯಂತೆ ಇರುತ್ತದೆ’ ಎಂದು ಲೇಖಕರು ಹೇಳಿದ್ದಾರೆ. ಇದು ಭಾಗಶಃ ಸತ್ಯ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇರುವ ಕುರುಬರಲ್ಲಿ ಕೆಲವರು ಮಾತ್ರ ರೇವಣಸಿದ್ಧರನ್ನು ಗುರು ಎಂದು ಪರಿಗಣಿಸುತ್ತಾರೆ. ಮೂಲಭೂತವಾಗಿ ಈ ಗುರು ಪರಂಪರೆ ಲಿಂಗಾಯತ ಧರ್ಮದ ಪ್ರಭಾವವಾಗಿದ್ದು, ಲಿಂಗಾಯತರು ಹೆಚ್ಚು ಇರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಇದೆ. ಆ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಸಮುದಾಯದವರದ್ದೂ ಒಂದೇ ರೀತಿ ಸಂಸ್ಕೃತಿ ಇದೆ. ಅದೇ, ಹಳೇ ಮೈಸೂರು ಪ್ರಾಂತ್ಯಕ್ಕೆ ಬಂದರೆ, ಈ ಗುರು ಪರಂಪರೆಯೇ ಇಲ್ಲ. ಅಲ್ಲಿ ಸಾಮಾನ್ಯವಾಗಿ ಒಕ್ಕಲಿಗರ ಸಂಸ್ಕೃತಿಯ ಪ್ರಭಾವ ಎಲ್ಲಾ ಜಾತಿಯವರ ಮೇಲಾಗಿದೆ.