ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಮುಕ್ತ ವ್ಯಾಪಾರಕ್ಕೆ ಒಳಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ವಿದೇಶಿ ಹಾಲಿನ ಉತ್ಪನ್ನಗಳು ಭಾರತಕ್ಕೆ ದಾಳಿಯಿಡುವುದರಿಂದ, ಹೈನುಗಾರಿಕೆಯನ್ನೇ ಜೀವನಾಧಾರ ಮಾಡಿಕೊಂಡಿರುವ ಸಣ್ಣ ರೈತರು ಹಾಗೂ ಸಾಮಾನ್ಯ ಜನರ ಬದುಕು ಬೀದಿಗೆ ಬರುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ನೆರೆಹಾವಳಿಯಂತಹ ವಿಕೋಪಗಳಿಂದ ಈಗಾಗಲೇ ರೈತರ ಬದುಕು ತತ್ತರಿಸಿದೆ. ಇನ್ನು ಆರ್ಸಿಇಪಿ ಜಾರಿಯಾದರೆ, ಹೈನುಗಾರಿಕೆಯನ್ನೇ ನಂಬಿದ ಸಣ್ಣ ರೈತರು ಮತ್ತು ಸಾಮಾನ್ಯ ಜನರ ಬದುಕು ಮೂರಾಬಟ್ಟೆಯಾಗುವುದರಲ್ಲಿ ಎರಡು ಮಾತಿಲ್ಲ.