ಈರುಳ್ಳಿ ಬೆಲೆ ಗಗನಕ್ಕೆ ಏರಿದೆ. ಹಾಗೆಂದು ಈ ಏರಿದ ಬೆಲೆಯ ಪ್ರಯೋಜನ ರೈತರಿಗೆ ಆಗುತ್ತಿಲ್ಲ. ನಮ್ಮೂರಿನ ರೈತನೊಬ್ಬ ಒಂದು ತಿಂಗಳ ಹಿಂದೆ ಈರುಳ್ಳಿ ಮಾರಿದಾಗ ಅವನಿಗೆ ಸಿಕ್ಕಿದ್ದು ಕೆ.ಜಿ.ಗೆ ₹ 25 ಮಾತ್ರ. ಆದರೀಗ ಅದರ ಬೆಲೆ ₹ 100 ಆಗಿದೆಯೆಂದರೆ ಅವನಿಗೆ ಏನನಿಸಬಹುದು? ರೈತರಿಂದ ಕಡಿಮೆ ದರಕ್ಕೆ ಖರೀದಿಸಿ ಈ ಪರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸರಿಯಲ್ಲ. ಮಳೆಯಿಂದಾಗಿ ರೈತರ ಬೆಳೆ ಈಗ ನಾಶವಾಗಿರಬಹುದು. ಆದರೆ ಈವರೆಗೆ ಉಗ್ರಾಣದಲ್ಲಿ ಶೇಖರಿಸಿ ಕೃತಕ ಅಭಾವ ಉಂಟು ಮಾಡಿ, ಈರುಳ್ಳಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಸರ್ಕಾರ ನಿಯಂತ್ರಿಸಲಿ. ಮಳೆಯಿಂದ ಭೂಮಿಯಲ್ಲೇ ಈರುಳ್ಳಿ ಬೆಳೆ ನಾಶವಾದ ರೈತರ ನೆರವಿಗೆ ಮುಂದಾಗಲಿ.