‘ಕೃಷಿ ಕಾಯ್ದೆಗೆ ಏಕೆ ವಿರೋಧ?’ ಎಂಬ ಎ.ಸೂರ್ಯಪ್ರಕಾಶ್ ಅವರ ಲೇಖನ (ಪ್ರ.ವಾ., ಫೆ. 22) ಒಂದು ಮೇಲ್ನೋಟದ, ಅತ್ಯಂತ ಸರಳವಾದ ವಿಶ್ಲೇಷಣೆಯೇ ಹೊರತು, ಆ ಕಾಯ್ದೆಯ ದೂರಗಾಮಿ ಪರಿಣಾಮಗಳನ್ನಾಗಲೀ ಖಾಸಗೀಕರಣದ ಒಳಸುಳಿಗಳನ್ನಾಗಲೀ ತೆರೆದಿಡುವ ಸೂಕ್ಷ್ಮಾವಲೋಕನವಲ್ಲ ಎಂದೆನಿಸುತ್ತದೆ. ಹೊಸ ಕಾಯ್ದೆಯು ರೈತರಿಗೆ ಮಾರುಕಟ್ಟೆಯನ್ನು ಮುಕ್ತಗೊಳಿಸಿ ಅವರನ್ನು ಸಶಕ್ತರನ್ನಾಗಿಸುತ್ತದೆ ಎಂಬುದು ಭ್ರಮೆ ಅಷ್ಟೆ. ಮೇಲ್ನೋಟಕ್ಕೆ ಹೌದೆನಿಸಿದರೂ ವಾಸ್ತವದಲ್ಲಿ ರೈತ ಬಲಿಷ್ಠ ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಟಿಗೆ ಪಕ್ಕಾಗಿ ಇನ್ನೂ ಹೀನಾಯ ಸ್ಥಿತಿಗೆ ಹೋಗುತ್ತಾನೆ ಎಂಬುದಕ್ಕೆ ಇಂದು ಬಿಹಾರ ನಮ್ಮ ಮುಂದೆ ಜ್ವಲಂತ ನಿದರ್ಶನವಾಗಿದೆ.