‘ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಎದುರು ತಮ್ಮ ಊರಿನ ಶಾಲೆಯ ಅಭಿವೃದ್ಧಿಗೆ ಬೇಡಿಕೆ ಇಡಿ’ ಎಂಬ ಶಿಕ್ಷಣ ತಜ್ಞ ಪ್ರೊ. ಎಂ.ಆರ್.ದೊರೆಸ್ವಾಮಿ ಅವರ ಆಶಯ (ಪ್ರ.ವಾ., ಡಿ 20) ಮೆಚ್ಚುವಂತಹದ್ದು. ಆದರೆ ಅವರ ಈ ಸಲಹೆ ಚುನಾವಣೆಯ ಆಶಯಕ್ಕೆ ವಿರುದ್ಧವಾದದ್ದು. ಚುನಾವಣೆಗಳು ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಕೂಡಿರಬೇಕೇ ವಿನಾ ಚುನಾವಣೆ ಸಮಯದಲ್ಲಿ ಗ್ರಾಮಗಳಲ್ಲಿನ ಬಲಾಢ್ಯರ ಭರವಸೆಗಳಿಗೆ ಜನರ ಹಕ್ಕುಗಳು ಬಲಿಯಾಗುವ ಅವಕಾಶ ಮಾಡಿಕೊಡುವಂತೆ ಇರಬಾರದು.
ಇಂಥ ಪ್ರವೃತ್ತಿಯು ಮುಂಬರುವ ದಿನಗಳಲ್ಲಿ ಶಾಲಾಭಿವೃದ್ಧಿಯ ಕಾರಣ ನೀಡಿ, ಪಂಚಾಯಿತಿಯ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವುದಕ್ಕೆ ಹಾದಿಯಾಗಬಹುದು. ಶಾಲಾಭಿವೃದ್ಧಿ ಮತ್ತು ಚುನಾವಣೆ ಎರಡೂ ಬೇರೆ ಬೇರೆ ಆಶಯಗಳು. ಹಾಗಾಗಿ ಇಂತಹ ಭರವಸೆಗಳಿಗೆ ಬೇಡಿಕೆ ಇಡುವುದು ಸೂಕ್ತವಲ್ಲ. -ಡಾ. ಜಿ.ಬೈರೇಗೌಡ, ಬೆಂಗಳೂರು