ಪಾಕಿಸ್ತಾನದ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಧಾರವಾಡಕ್ಕೆ ಬಂದಿದ್ದ ಬೆಂಗಳೂರಿನ ಮೂವರು ವಕೀಲರ ವಿರುದ್ಧ ಸ್ಥಳೀಯ ವಕೀಲರು ಪ್ರತಿಭಟಿಸಿ, ಅವರು ಅರ್ಜಿ ಸಲ್ಲಿಸಲಾಗದೆ ವಾಪಸಾದ ಸುದ್ದಿ (ಪ್ರ.ವಾ., ಫೆ. 25) ಓದಿ ಆಶ್ಚರ್ಯವಾಯಿತು. ಜಾಮೀನು ಪಡೆಯುವುದು ನ್ಯಾಯದಾನ ಪ್ರಕ್ರಿಯೆಯ ಒಂದು ಭಾಗ. ದಿನಬೆಳಗಾದರೆ ಕೊಲೆಗಾರರು, ಅತ್ಯಾಚಾರಿಗಳು, ಕಳ್ಳರ ಪರವಾಗಿ ಇದೇ ವಕೀಲರು ಜಾಮೀನು ಅರ್ಜಿ ಗುಜರಾಯಿಸುತ್ತಾರೆ! ಹಾಗಾದರೆ ಇಂತಹ ಸಮಾಜಕಂಟಕರುಗಳೆಲ್ಲ ಅಪ್ಪಟ ದೇಶಪ್ರೇಮಿಗಳೇ? ಇಂತಹ ಅಪರಾಧಿಗಳಿಗೆಲ್ಲ ಜಾಮೀನು ಸಿಗಬಹುದಾದರೆ, ಕೇವಲ ಘೋಷಣೆ ಕೂಗಿದವರಿಗೇಕೆ ಜಾಮೀನು ಸಿಗಬಾರದು? ಜಾಮೀನು ನೀಡಿದ ಮಾತ್ರಕ್ಕೆ ವಿಚಾರಣೆ ಮುಗಿಯುವುದಿಲ್ಲ. ವಿಚಾರಣೆಯ ನಂತರ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆಯಾಗಲಿ. ಅದು ಬಿಟ್ಟು ಹೀಗೆ ಬಾಲಿಶ ವರ್ತನೆ ತೋರುವುದು ವಕೀಲರಿಗೆ ಶೋಭೆ ತರುವುದಿಲ್ಲ.