ಕುಣಿಯತೊಡಗಿದೆ ಕುರುಡು ಕಾಂಚಾಣ (ಪ್ರ.ವಾ., ಒಳನೋಟ, ಮಾರ್ಚ್ 31) ಲೇಖನ ನಗ್ನಸತ್ಯವನ್ನು ಅನಾವರಣಗೊಳಿಸಿದೆ. ಲೋಕಸಭಾ ಚುನಾವಣೆ ರಂಗೇರುತ್ತಿದೆ. ಉಮೇದುವಾರರ ಚರ, ಸ್ಥಿರ ಆಸ್ತಿಗಳ ವಿವರಗಳು ಪ್ರಕಟವಾಗುತ್ತಿವೆ.
ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು (ಕೆಲ ಅಪವಾದ ಹೊರತುಪಡಿಸಿ) ಕೋಟಿ ಕೋಟಿ ಸಂಪತ್ತು ಉಳ್ಳವರಾಗಿದ್ದಾರೆ. ಅಲ್ಲಿಗೆ ಚುನಾವಣೆಯ ಸ್ಪರ್ಧೆ ಶ್ರೀಸಾಮಾನ್ಯನಿಗೆ ಕನ್ನಡಿಯ ಗಂಟೇ ಸರಿ.
ಚುನಾವಣಾ ಆಯೋಗ ನಿಗದಿಪಡಿಸಿದ ಖರ್ಚಿನ ಮಿತಿಯಲ್ಲಿ ಗೆಲುವು ಸಾಧ್ಯವಿಲ್ಲವೆಂದು ಮಾಧ್ಯಮಗಳ ರಹಸ್ಯ ಕಾರ್ಯಾಚರಣೆ ವೇಳೆ ಕೆಲವರು ಕ್ಯಾಮೆರಾ ಮುಂದೆ ಒಪ್ಪಿಕೊಂಡಿದ್ದಾರೆ.
ಆಯೋಗ ಏನೆಲ್ಲ ಬಿಗಿ ಕ್ರಮ ಕೈಗೊಂಡರೂ, ಮತದಾರರಿಗೆ ಆಮಿಷಗಳ ಹಸ್ತಾಂತರ ನಿಲ್ಲದು. ಹೀಗೆ, ಕೋಟಿ ಕೋಟಿ ಸುರಿದು ಆಯ್ಕೆಯಾದವರ ಆದ್ಯತೆ, ಹೂಡಿದ ಬಂಡವಾಳದ ಮರು ಗಳಿಕೆಯೇ ಆಗಿರುತ್ತದೆ. ರಾಜಕೀಯವು ಹಣ ಹೂಡಿ ಹಣ ತೆಗೆಯುವ ಉದ್ಯಮವಾಗಿ ಬದಲಾಗುತ್ತಿರುವುದು ವ್ಯಂಗ್ಯದ ಪರಮಾವಧಿ.