ವೃದ್ಧರು, ಅಂಗವಿಕಲರು, ವಿಧವೆಯರು ಹಾಗೂ ಬುದ್ಧಿಮಾಂದ್ಯರಿಗೆ ಸರ್ಕಾರ ಪ್ರತೀ ತಿಂಗಳು ನೀಡುವ ಮಾಸಾಶನವನ್ನು ಫಲಾನುಭವಿಗಳು ಖುದ್ದಾಗಿ ಅಂಚೆ ಇಲಾಖೆಗೆ ಬಂದು ಪಡೆದುಕೊಳ್ಳಬೇಕು. ಬಹುತೇಕ ಮೇಲೆ ತಿಳಿಸಿದ ವ್ಯಕ್ತಿಗಳು ದೈಹಿಕ ಹಾಗೂ ಮಾನಸಿಕವಾಗಿ ಅಶಕ್ತರಾಗಿರುತ್ತಾರೆ. ತಮ್ಮ ಕೆಲಸಗಳನ್ನು ತಾವೇ ಅಲೆದಾಡಿ ಮಾಡಿಕೊಳ್ಳಲು ಕಷ್ಟಪಡುತ್ತಿರುತ್ತಾರೆ. ಇವರಲ್ಲಿ ಬಡತನದ ರೇಖೆಯಲ್ಲಿ ಇರುವವರೇ ಹೆಚ್ಚಾಗಿದ್ದಾರೆ. ಅವರ ಹತ್ತಿರ ಸ್ವಂತ ವಾಹನ ಇರುವುದಿಲ್ಲ ಅಥವಾ ಇದ್ದರೂ ಚಾಲನೆ ಮಾಡುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಹೀಗಾಗಿ ಇಂತಹ ವ್ಯಕ್ತಿಗಳು ಅಂಚೆ ಇಲಾಖೆಗೆ ಹೋಗಿ ಹಣ ಪಡೆದುಕೊಂಡು ಬರಲು ತೀವ್ರ ಕಷ್ಟಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ನೇರವಾಗಿ ಅವರ ಮನೆಬಾಗಿಲಿಗೆ ಈ ಹಣವನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದಂತೆಯೂ ಆಗುತ್ತದೆ.