‘ಎಚ್ಡಿಕೆ ಸರ್ಕಾರ ಉರುಳಿಸಲು ಬಿಡುವುದಿಲ್ಲ’(ಪ್ರ.ವಾ., ಜೂನ್ 28) ಎಂಬ ಎಚ್ಚರಿಕೆಯನ್ನು ನಂಜಾವಧೂತ ಸ್ವಾಮೀಜಿ ನೀಡಿರುವುದು ಅಚ್ಚರಿ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಮಾತೆ ಮಹಾದೇವಿ ಅವರು ‘ಕಾಂಗ್ರೆಸ್ಗೇ ಮತ ಹಾಕಿ’ ಎಂಬ ಫರ್ಮಾನು ಹೊರಡಿಸಿದ್ದರು. ಇವೆಲ್ಲವನ್ನೂ ನೋಡಿದರೆ ನಮ್ಮ ದೇಶದಲ್ಲಿ ‘ಮಠಾಧೀಶರ ಕೆಲಸವೇನು’ ಎಂಬ ಬಗ್ಗೆ ಚಿಂತಿಸಬೇಕಾದ ದಿನಗಳು ಬಂದಿವೆ ಎನಿಸುತ್ತಿದೆ.
ಎಲ್ಲ ಮಾನವರೂ ಸಮಾನರು, ಎಲ್ಲರೂ ಏಳಿಗೆ ಹೊಂದಬೇಕು, ಎಲ್ಲರಿಗೂ ಒಳಿತಾಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ಸ್ವಾಮಿಗಳು ಮತ್ತು ಮಠಗಳು ಕೆಲಸ ಮಾಡಬೇಕು. ಧರ್ಮದ ಹಾದಿಯಲ್ಲಿ ನಡೆಯಲು ಅವರು ಜನರನ್ನು ಪ್ರೇರೇಪಿಸಬೇಕು ಎಂಬುದು ಜನರ ತಿಳಿವಳಿಕೆ.
ಆದರೆ ಇತ್ತೀಚೆಗೆ ಕೆಲವು ಸ್ವಾಮಿಗಳು ರಾಜಕಾರಣದಲ್ಲಿ ಮೂಗು ತೂರಿಸಿ ಅವರ ಅನುಯಾಯಿಗಳಿಗೆ ಇಂತಹ ಪಕ್ಷಕ್ಕೇ ಮತ ಹಾಕಿ ಎಂದು ನಿರ್ದೇಶನ ನೀಡು ವುದು, ತಮ್ಮ ಕುಲಬಾಂಧವರಿಗಷ್ಟೇ ಅಧಿಕಾರ ಸಿಗಬೇಕು ಎಂಬ ಕಾರಣಕ್ಕೆ ಇತರ ಪಕ್ಷದವರಿಗೆ ಎಚ್ಚರಿಕೆ ಅಥವಾ ಧಮಕಿಯನ್ನು ನೀಡುವುದು ಎಷ್ಟು ಸರಿ? ಇದರ ಬದಲು ಅವರು ಮಠವನ್ನು ತೊರೆದು ರಾಜಕಾರಣ ಮಾಡುವುದು ಒಳಿತಲ್ಲವೇ?