ನಮ್ಮ ಪರಿಚಯದವರ ಮಕ್ಕಳು ಹೋಗುತ್ತಿರುವ ಸರ್ಕಾರಿ ಶಾಲೆಯ ಅಡುಗೆ ಸಿಬ್ಬಂದಿ ಇತ್ತೀಚೆಗೆ ರಾಜೀನಾಮೆ ನೀಡಿ ಕೂಲಿ ಕೆಲಸದತ್ತ ಮುಖ ಮಾಡಿದರು. ಕೊರೊನಾ ಅವಧಿಯಲ್ಲಿ ಸುಮಾರು ಒಂದು ವರ್ಷ ಮಕ್ಕಳಿಗೆ ಬಿಸಿಯೂಟ ಇರಲಿಲ್ಲ.
ಆಗ ನಿರುದ್ಯೋಗಿಗಳಾದ ಬಿಸಿಯೂಟ ತಯಾರಕರು ನಿಚ್ಚಳವಾಗಿ ನಿರ್ಗತಿಕರಾದರು. ಇವರಿಗೆ ಕೊರೊನಾ ಪ್ಯಾಕೇಜ್ನಲ್ಲೂ ಏನೂ ದೊರೆಯಲಿಲ್ಲ. ಹೀಗಾಗಿ ಇವರು ರಾಜೀನಾಮೆ ನೀಡಬೇಕಾಯಿತು. ಸಮಸ್ಯೆ ಏನೆಂದರೆ, ಬಿಸಿಯೂಟ ತಯಾರಿಸಲು ಅವರ ಜಾಗಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಯಾರೂ ಬರಲು ಒಪ್ಪಲಿಲ್ಲ. ತದನಂತರ ಊರ ಹಿರಿಯರ ಕೋರಿಕೆಯ ಮೇರೆಗೆ, ಮಕ್ಕಳಿಗೆ ಊಟ ತಪ್ಪಬಾರದೆಂದು ಪೋಷಕರೇ ಬಂದು ಕೆಲಸಕ್ಕೆ ಸೇರಿಕೊಂಡರು. ಕಾರಣವಿಷ್ಟೇ, ಅಲ್ಲಿ ದೊರಕುವುದು ತಿಂಗಳಿಗೆ ಕೇವಲ ಎರಡೂವರೆ ಸಾವಿರ ರೂಪಾಯಿಯ ಆಸುಪಾಸು. ಹಾಗಾಗಿ ಇವತ್ತು ಕೂಲಿಗೆ ಹೋದರೆ ಪ್ರತಿದಿನ ₹ 250-300 ಸಿಗದೇ ಇರದು. ಅಂದರೆ ತಿಂಗಳಿಗೆ ಎಂಟರಿಂದ ಒಂಬತ್ತು ಸಾವಿರ ದುಡಿದುಕೊಳ್ಳಬಹುದು.