ನಗರ ರೈಲ್ವೆ ಹಾಗೂ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಮಾತ್ರ ಎಸ್ಕಲೇಟರ್ ಹಾಗೂ ಲಿಫ್ಟ್ ವ್ಯವಸ್ಥೆ ಇದೆ. ಆದರೆ ನಗರವನ್ನು ದಾಟಿದ ನಂತರ ಯಾವುದೇ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇಲ್ಲ. ಇದರಿಂದ ವೃದ್ಧರು, ಮಕ್ಕಳು ಹಾಗೂ ದೈಹಿಕವಾಗಿ ಆಶಕ್ತ ನಾಗರಿಕರು ಪ್ಲಾಟ್ಫಾರ್ಮ್ಗಳನ್ನು ದಾಟುವುದು ಪ್ರಯಾಸವಾಗುತ್ತದೆ. ರೈಲ್ವೆ ಇಲಾಖೆಯು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಒದಗಿಸುವಾಗ ಚಿಕ್ಕ- ದೊಡ್ಡ ನಿಲ್ದಾಣ ಎಂಬ ತಾರತಮ್ಯ ಧೋರಣೆ ಬದಲಾಗಬೇಕಾಗಿದೆ. ಬೆಂಗಳೂರು- ಮೈಸೂರು ನಡುವೆ ಸಹ ಯಾವುದೇ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ವ್ಯವಸ್ಥೆ ಇಲ್ಲ. ಕೆಂಗೇರಿ ರೈಲು ನಿಲ್ದಾಣದಲ್ಲಿ ಕೆಲವರು ಸ್ಕೈವಾಕ್ ಬಳಸಿದರೆ ಮತ್ತೆ ಕೆಲವರು ನೇರವಾಗಿ ಹಳಿಯನ್ನೇ ದಾಟುತ್ತಾರೆ. ನಿತ್ಯವೂ ಪ್ರಯಾಣಿಸುವವರು ಹಳಿಯ ಪಕ್ಕದಲ್ಲಿಯೇ ಕಲ್ಲುಗಳನ್ನು ಜೋಡಿಸಿಟ್ಟುಕೊಂಡು ಎತ್ತರಿಸಿದ ಜಾಗದಿಂದ ಒಂದು ಪ್ಲಾಟ್ಫಾರ್ಮ್ನಿಂದ ಮತ್ತೊಂದಕ್ಕೆ ಜಿಗಿಯುವ ಅಭ್ಯಾಸವಿದೆ. ಇದು ಸುರಕ್ಷಿತವಲ್ಲದ ನಡೆ.