ಚುನಾವಣೆಯನ್ನು ಮುಂದೆ ಇಟ್ಟುಕೊಂಡು ಕೇಂದ್ರ ಸರ್ಕಾರವು ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಇದು ಸ್ವಾಗತಾರ್ಹ. ಅದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬೆಂಬಲ ಬೆಲೆಯಲ್ಲ, ಬಲೆಯಂತೆ ಕಾಣುತ್ತಿದೆ.
ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಬಹಳ ದಿನ ಶೇಖರಣೆ ಮಾಡಿಡಬಹುದು ಹಾಗೂ ಸೂಕ್ತ ಬೆಲೆ ದೊರಕುವ ವೇಳೆ ಮಾರಾಟ ಮಾಡಬಹುದು. ಆದರೆ ಕಬ್ಬು, ತರಕಾರಿಗಳ ಕಥೆ ಏನು? ರೈತ ಕೈ ಸುಟ್ಟುಕೊಳ್ಳು ವುದು ಇವುಗಳಿಂದಲೇ. ಇವುಗಳಿಗೆ ಏಕೆ ಸರ್ಕಾರ ಬೆಂಬಲ ಬೆಲೆ ಸೂಚಿಸುತ್ತಿಲ್ಲ? ಕಬ್ಬು ಬೆಳೆಗಾರರು ಕಂಗೆಟ್ಟಿದ್ದಾರೆ.
ಆದರೂ ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಿಲ್ಲ. ತರಕಾರಿ ಬೆಲೆಯಲ್ಲಿ ರೈತನಿಗೆ 1 ರೂಪಾಯಿ ಸಿಕ್ಕರೆ, ಗ್ರಾಹಕನಿಗೆ 10 ರೂಪಾಯಿಯ ಹೊರೆ. ಮಧ್ಯವರ್ತಿ ಜೇಬಿಗೆ 9 ರೂಪಾಯಿ ಸೇರುತ್ತಿದೆ. ಇದಕ್ಕೆ ಕಡಿವಾಣ ಬೇಡವೇ? ಮಾರುಕಟ್ಟೆ ವ್ಯವಸ್ಥೆ ಸುಧಾರಣೆಯಾಗದ ಹೊರತು ರೈತನ ಬಾಳು ಹಸನಾಗದು.
ಇಂದಿಗೂ ಮಧ್ಯವರ್ತಿಗಳು ಹೇಳಿದ ಬೆಲೆಗೆ ತನ್ನ ಪದಾರ್ಥಗಳನ್ನು ಕೊಟ್ಟು ಹೋಗಬೇಕು. ಇಲ್ಲವಾದಲ್ಲಿ ಅವನ ವಿರುದ್ಧ ದಬ್ಬಾಳಿಕೆ ನಡೆಯುತ್ತದೆ. ಇಂತಹ ಸ್ಥಿತಿಯಲ್ಲಿ ರೈತನಿಗೆ ಲಾಭವಾಗುವುದಾದರೂ ಏನು?