ಆಡುಭಾಷೆಗೂ ಬರಹದ ಭಾಷೆಗೂ ವ್ಯತ್ಯಾಸವಾಗುತ್ತದೆ ಎಂಬುದು ನಿಜ. ಆದರೆ ವ್ಯತ್ಯಾಸ ತುಂಬಾ ದೂರ ಹೋಗಬಾರದು. ಸತ್ಯ ಏನೆಂದರೆ, ಕನ್ನಡದ ಈಗಿನ ಬರಹದ ಭಾಷೆ ಆಡುಭಾಷೆಗೆ ತುಂಬಾ ದೂರ ಇದೆ. ಹಾಗಂತ ಮಹಾಪ್ರಾಣ ಅಕ್ಷರಗಳನ್ನು ಅಂತೆಯೇ ಷ ಋ ಅಕ್ಷರಗಳನ್ನು ಏಕಾಏಕಿ ಬಿಟ್ಟು ಬರೆಯಲು ಸಾಧ್ಯವಿಲ್ಲ. ಬದಲಾಗಿ ಎರಡು ರೂಪಗಳನ್ನು ಮೊದಲಿಗೆ ಒಪ್ಪಿಕೊಳ್ಳಬೇಕಿದೆ. ಉದಾಹರಣೆಗೆ, ಅಭಿಮಾನ- ಅಬಿಮಾನ, ಲಾಭ- ಲಾಬ ಹೀಗೆ. ಈಗಾಗಲೇ ಕಥೆ- ಕತೆ, ಘಂಟೆ- ಗಂಟೆ ಈ ಎರಡು ರೂಪಗಳನ್ನು ಒಪ್ಪಿಕೊಂಡಿದ್ದೇವೆ. ಮಹಾಪ್ರಾಣ ಅಕ್ಷರಗಳನ್ನು ಬಿಟ್ಟು ಬರೆದಾಕ್ಷಣ ಸಂಸ್ಕೃತ ಪದಗಳನ್ನು ತ್ಯಜಿಸಿದ್ದೇವೆ ಎಂದರ್ಥವಲ್ಲ. ಬದಲಾಗಿ ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದೇವೆ ಎಂದರ್ಥ. ಬ್ರಿಟಿಷರು ಬೆಂಗಳೂರು (Bengaluru) ಎಂಬ ಪದವನ್ನು Banglore ಎಂದು, ಶಿವಮೊಗ್ಗ (Shivamogga) ಎಂಬ ಪದವನ್ನು Shimoga ಎಂದೇ ಹೇಳುತ್ತಿದ್ದರು ಹಾಗೆಯೇ ಬರೆಯುತ್ತಿದ್ದರು. ಹೀಗೆ ಅವರ ಆಡಳಿತ ಕಾಲದಲ್ಲಿ ಬದಲಾದ ಪದಗಳನ್ನು ನಾವು ಆ ಹಿನ್ನೆಲೆಯಲ್ಲಿಯೇ ನೋಡಬೇಕು. ಭಾಷೆಯ ನಿಜವಾದ ರೂಪವನ್ನು ಜನರು ಆಡುವ ಮಾತಿನಲ್ಲಿ ಮಾತ್ರ ನೋಡಬಹುದು. ಇದು ಎಷ್ಟು ಸಹಜ ಎಂದರೆ, ಹೊಸದಾಗಿ ಮಕ್ಕಳಿಗೆ ಕಲಿಸುವಾಗ ಸುಧಾರಿತ ಲಿಪಿಯಲ್ಲಿ ಕಲಿಸಿದರೆ ಮೀನು ನೀರಿನಲ್ಲಿ ಈಜಿದಷ್ಟು ಸುಲಭವಾಗುತ್ತದೆ.