ಗೋ ರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆದ ಗುಂಪು ದಾಳಿಗೆ ಸಂಬಂಧಿಸಿದಂತೆ ಮೋಹನ ಭಾಗವತ್ ಅವರ ಹೇಳಿಕೆಯ ಕುರಿತು ಆರ್ಗನೈಸರ್ ಪತ್ರಿಕೆಯ ಮಾಜಿ ಸಂಪಾದಕ ಡಾ. ಆರ್.ಬಾಲಶಂಕರ್ ಅವರ ವಿಶ್ಲೇಷಣೆಯಲ್ಲಿ (ಪ್ರ.ವಾ., ಜುಲೈ 10) ತಪ್ಪು ಮಾಹಿತಿ ಇದೆ. ಆರ್ಎಸ್ಎಸ್ ಮತ್ತು ಅದರ ಪರಿವಾರದ ಮೇಲೆ ಇರುವ ಗುರುತರವಾದ ಆರೋಪವೇ ಇತಿಹಾಸವನ್ನು ತಿರುಚುತ್ತಾರೆ ಎಂಬುದು. ಅದನ್ನು ಸಂಘದ ಮುಖವಾಣಿ ಪತ್ರಿಕೆಯ ಮಾಜಿ ಸಂಪಾದಕರು ಗಾಂಧೀಜಿ ಮತ್ತು ಜಿನ್ನಾ ಅವರ ಕುರಿತಾದ ತಿರುಚಿದ ಮಾಹಿತಿಯನ್ನು ಉಲ್ಲೇಖಿಸಿ ಸಾಬೀತು ಮಾಡಿದ್ದಾರೆ. 1916ರ ಲಖನೌ ಒಪ್ಪಂದವು ಗಾಂಧೀಜಿ ಮತ್ತು ಜಿನ್ನಾ ಅವರ ನಡುವೆ ಆಯಿತು. ಮಾಂಸಕ್ಕಾಗಿ ಮುಸ್ಲಿಮರು ಗೋಹತ್ಯೆ ಮಾಡುವುದನ್ನು ನಿಷೇಧಿಸುವುದು ಈ ಒಪ್ಪಂದದ 16 ಅಂಶಗಳಲ್ಲಿ ಸೇರಿತ್ತು ಎಂದು ಲೇಖಕರು ತಿಳಿಸಿದ್ದಾರೆ.