ಕಚೇರಿಗಳಲ್ಲಿ ಕಿರಿಯ ಅಧಿಕಾರಿಗಳು ಮೇಲಿನ ಅಧಿಕಾರಿಗಳ ಸಮ್ಮುಖದಲ್ಲಿ, ಮನೆಯಲ್ಲಿ ಕಿರಿಯರು ಹಿರಿಯರ ಎದುರು, ಶಾಲೆಯಲ್ಲಿ ಗುರುಗಳು ಇರುವೆಡೆಯಲ್ಲಿ ವಿದ್ಯಾರ್ಥಿಗಳು, ಮಠ-ಮಂದಿರಗಳಲ್ಲಿ ಭಕ್ತರು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದಿಲ್ಲ. ಇಂಥ ವರ್ತನೆಗಳು ಸಂಸ್ಕೃತಿಯ ಭಾಗವಾಗಿ ಜನರಲ್ಲಿ ರೂಢಿಗತವಾಗಿ ಪಾಲನೆಯಾಗಿ ಬಂದಿರುತ್ತವೆ ವಿನಾ ಈ ಕುರಿತು ಸರ್ಕಾರದ ಕಾನೂನುಗಳು, ಆದೇಶಗಳು ಇರುವುದಿಲ್ಲ. ಹಿರಿಯರನ್ನು ಕಂಡಾಗ ಕಿರಿಯರು ಎದ್ದುನಿಲ್ಲುವುದು, ಅವರಿಗೆ ನಮಸ್ಕರಿಸುವುದು, ಅವರ ಬಳಿ ವಿನಯಪೂರ್ವಕವಾಗಿ ಮೆಲುದನಿಯಲ್ಲಿ ಮಾತನಾಡುವುದು, ಸ್ನೇಹಿತರು ಭೇಟಿಯಾದಾಗ ಪರಸ್ಪರ ಶುಭ ಹಾರೈಸುವುದು, ಹಬ್ಬ-ಹರಿದಿನಗಳಲ್ಲಿ ಬಂಧು ಬಳಗದವರು ಶುಭ ಕೋರುವುದು, ಹುಟ್ಟುಹಬ್ಬಕ್ಕೆ ಶುಭಕಾಮನೆಗಳನ್ನು ಹೇಳುವುದು– ಇವೆಲ್ಲ ಸುಸಂಸ್ಕೃತ ನಡವಳಿಕೆಗಳೇ ವಿನಾ ಇವುಗಳಿಗೆ ಕಾನೂನು ಕಟ್ಟಲೆಗಳ ಚೌಕಟ್ಟು ಇರುವುದಿಲ್ಲ. ಹಾಗೆಂದು ಸ್ವೇಚ್ಛಾಚಾರಿಯಾಗಿ ನಡೆದುಕೊಂಡರೆ ಅದು ದುರ್ವರ್ತನೆ ಎನಿಸಿಕೊಳ್ಳುತ್ತದೆ.