ಕೇರಳದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಅಮಾಯಕ ಮಹಿಳೆಯರ ನರಬಲಿ ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಶಿಲಾಯುಗವಲ್ಲ. ಅಂತೆಯೇ ಮಧ್ಯಯುಗದಲ್ಲಿ ಯುದ್ಧದ ಸಮಯದಲ್ಲಿ ಇಂತಹವು ಸಾಮಾನ್ಯವಾಗಿದ್ದವು ಎಂಬುದನ್ನು ಇತಿಹಾಸ ನಮಗೆ ತಿಳಿಸುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಮೂಢನಂಬಿಕೆಗಳ ಕಾರಣದಿಂದ ನರಬಲಿ ನೀಡುವುದು ಅನಾಗರಿಕ ವರ್ತನೆಯಾಗಿದೆ. ಕಾಡಿನ ಪ್ರಾಣಿಗಳು ಹಸಿದಾಗ ಮಾತ್ರ ಬೇರೆ ಪ್ರಾಣಿಗಳನ್ನು ಕೊಲ್ಲುತ್ತವೆ, ಆದರೆ ಮನುಷ್ಯ ಮನುಷ್ಯನನ್ನು ಕೊಲ್ಲಲು ಕಾರಣವೇ ಬೇಕಾಗಿಲ್ಲ ಎಂಬಂತಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ನರಬಲಿ ಕೊಡಬೇಕೆಂಬ ಕಾಮುಕನ ಮಾತನ್ನು ಕೇಳಿದ ದಂಪತಿಯೂ ಆ ವ್ಯಕ್ತಿಯಷ್ಟೇ ಅಪರಾಧಕ್ಕೆ ಹೊಣೆಗಾರರು.