ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿ ಹೇಳಿಕೆಯಲ್ಲಿ ವಾಸ್ತವದ ಅರಿವು

Last Updated 14 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ಸ್ವಾಮೀಜಿಗಳು ಮದುವೆ ಆಗಿಯೇ ಮಠ ನಡೆಸಲಿ’ ಎಂದು ಚಿತ್ತಾಪುರ ತಾಲ್ಲೂಕಿನ ಕರದಾಳ್ ಬ್ರಹ್ಮರ್ಷಿ ನಾರಾಯಣ ಗುರುಗಳ ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿರುವುದು (ಪ್ರ.ವಾ., ಸೆ. 12) ಸರಿಯಾಗಿಯೇ ಇದೆ! ಈ ಹಿಂದೆ ಋಷಿಮುನಿಗಳು, ವೇದವ್ಯಾಸರು, ಬಸವಣ್ಣನವರು ಸೇರಿದಂತೆ ಅನೇಕರು ಮದುವೆಯಾಗಿ ಆಶ್ರಮ ನಡೆಸಿದ್ದಾರೆ. ವಿವಾಹದ ನಂತರವೂ ಅಂದರೆ ಬ್ರಹ್ಮಚರ್ಯದ ನಂತರದ ಆಶ್ರಮವಾಗಿರುವ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ನಂತರವೂ ತಪಸ್ಸು ಕೈಗೊಳ್ಳುತ್ತಿದ್ದರು. ಅಲ್ಲದೆ ಮದುವೆಯಾದ ನಂತರವೂ ನಮ್ಮ ಅನೇಕ ಋಷಿಮುನಿಗಳು ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು. ಮಹರ್ಷಿ ಯಾಜ್ಞ್ಯವಲ್ಕ್ಯರಂತೂ ಎರಡೆರಡು ಮದುವೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಪ್ರಣವಾನಂದ ಸ್ವಾಮೀಜಿಯ ಹೇಳಿಕೆಯಲ್ಲಿ ಅರ್ಥವಿದೆ!

ಇಂದ್ರಿಯ ನಿಗ್ರಹ ಮಾಡುವುದನ್ನು ಮಾತ್ರ ಬ್ರಹ್ಮಚರ್ಯವೆಂದು ತಿಳಿದವರೇ ಹೆಚ್ಚು ಮಂದಿ. ಆದರೆ ಬಸವಣ್ಣನವರು, ಮನಸ್ಸಿನಲ್ಲಿ ವಿಷಯ ಸುಖದ ಕಾಮನೆಗಳನ್ನು ಇಟ್ಟುಕೊಂಡು ಇಂದ್ರಿಯಗಳನ್ನು ಕೃತಕವಾಗಿ ನಿಗ್ರಹಿಸುವುದು ಅಪಾಯಕಾರಿ ಎನ್ನುತ್ತಾರೆ. ಸಾಮಾನ್ಯವಾಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡುಪಿಟ್ಟು ಲೋಕವೇ ತಮ್ಮ ಕುಟುಂಬವೆಂದು ಭಾವಿಸುವವರು, ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಹೊರಟವರು ಸ್ವಾಮೀಜಿಗಳು ಎಂಬುದು ಎಲ್ಲರ ಭಾವನೆ. ಆದರೆ ಈಗ ಏನಾಗಿದೆ? ಸಾವಿರಾರು ರೂಪಾಯಿಗಳ ಮೊಬೈಲ್ ಫೋನನ್ನು ಕೈಯಲ್ಲಿ ಇಟ್ಟುಕೊಂಡು, ಲಕ್ಷಗಟ್ಟಲೆ ಬೆಲೆಬಾಳುವ ಕಾರಿನಲ್ಲಿ ಸಂಚರಿಸುವ ಸ್ವಾಮೀಜಿಗಳು ಕಠಿಣ ಬ್ರಹ್ಮಚರ್ಯವನ್ನು ಪಾಲಿಸುವುದಾದರೂ ಹೇಗೆ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ! ಹೀಗಾಗಿ ಬ್ರಹ್ಮಚರ್ಯೆ ಹಾಗೂ ಸ್ವಾಮೀಜಿ ಸ್ಥಾನ ಇವೆರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುವುದು ಕಷ್ಟಕರ ಎಂಬ ಸತ್ಯವನ್ನು ಅರಿತುಕೊಂಡೇ ಪ್ರಣವಾನಂದ ಸ್ವಾಮೀಜಿ ಹೇಳಿಕೆ
ನೀಡಿರುವುದರಲ್ಲಿ ವಾಸ್ತವದ ಅರಿವಿದೆ.

⇒ಹರಳಹಳ್ಳಿ ಪುಟ್ಟರಾಜು,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT