ಚುನಾವಣೆ ಭರಾಟೆಯಲ್ಲಿ ರಾಗ–ದ್ವೇಷಗಳು ಉಲ್ಬಣಗೊಂಡಿವೆ. ಒಬ್ಬರ ಮೇಲೊಬ್ಬರು ಉಗ್ರವಾದ ಭಾಷಣಗಳ ಬಾಣಗಳನ್ನೇ ಬಿಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ‘ಕಳ್ಳ ಕಳ್ಳ’ ಎಂದು ಜರೆಯುತ್ತಾರೆ. ಮೋದಿಯವರು ‘ನಿಮ್ಮಪ್ಪ ಮಿಸ್ಟರ್ ಕ್ಲೀನ್ ಎಂದು ವಂದಿಮಾಗಧರಿಂದ ಹೆಸರು ತೆಗೆದುಕೊಂಡಿದ್ದರು. ಆದರೆ, ನಂಬರ್ ಒನ್ ಕಳ್ಳನಾಗಿಯೇ ಕಾಲವಾದರು’ ಎಂದು ಭಾಷಣದ ಬ್ರಹ್ಮಾಸ್ತ್ರದ ಈಟಿ ಪ್ರಯೋಗಿಸಿದ್ದಾರೆ. ಈ ಕಾಲದಲ್ಲಿ ಪರಸ್ಪರರ ಮೇಲಿನ ಆರೋಪಗಳು ಈ ಬಗೆಯವಾದರೆ, ಬಸವಣ್ಣನವರು ಕೂಡಲಸಂಗಮದೇವರನ್ನೇ ದೊಡ್ಡಕಳ್ಳ ಎಂದು ಕರೆದರು. ತಮ್ಮನ್ನು ಸಹ ಕಳ್ಳ ಎಂದು ಕರೆದುಕೊಂಡರು. ಅದು ಬಸವಣ್ಣನವರ ವೈಶಿಷ್ಟ್ಯವೇ ಸರಿ.