ಯುಗಾದಿ ಸಂದರ್ಭದಲ್ಲಿ ರತ್ನ ಪಕ್ಷಿ ಅಥವಾ ಸಾಂಬಾರ್ ಕಾಗೆಯನ್ನು ನೋಡಲು ಜನ ತಂಡೋಪತಂಡವಾಗಿ ಹೊಲಗದ್ದೆಗಳಿಗೆ ಹೋಗುವುದನ್ನು ಕಾಣುತ್ತೇವೆ. ಅದೇ ರೀತಿ ಬೇವಿನ ಹೂಗಳು, ಎಲೆಗಳು ಬೇಕೇಬೇಕಾಗಿರುವುದರಿಂದ ಆ ದಿನ ಬೇವಿನ ಮರಕ್ಕೆ ಮುಗಿಬೀಳುವವರ ಸಂಖ್ಯೆಯೂ ಕಡಿಮೆ ಇಲ್ಲ. ಆಚರಣೆಗಳು ತಪ್ಪಲ್ಲ, ಆದರೆ ಮೂಲ ಉದ್ದೇಶವನ್ನೇ ಮರೆತರೆ? ರತ್ನ ಪಕ್ಷಿಯು ಇತರ ಪಕ್ಷಿಗಳಿಗಿಂತ ತುಸು ದುರ್ಬಲ. ಹೀಗಾಗಿ ಅದು ಅತಿ ಸುಲಭವಾಗಿ ಬೇಟೆಗಾರರಿಗೆ ಬಲಿಯಾಗುತ್ತದೆ. ಬಹುಶಃ ಇದರ ಅರಿವಿದ್ದ ನಮ್ಮ ಪೂರ್ವಜರು ಇದರ ಸಂರಕ್ಷಣೆಗಾಗಿ ಇಂತಹದ್ದೊಂದು ಆಚರಣೆ ತಂದಿದ್ದಿರಬಹುದೇನೋ. ಆದರೆ ಈ ಪಕ್ಷಿ ನಿಜಕ್ಕೂ ಈಗ ಅಪಾಯದ ಅಂಚಿನಲ್ಲಿದೆ. ಇದರ ಗೂಡನ್ನು ಹುಡುಕಿ, ಮೊಟ್ಟೆ, ಮರಿಗಳ ಗೋಣು ಮುರಿದು ಬಿಸಾಡುವ ವಿಕೃತ ಮೂಢನಂಬಿಕೆ ಜೀವಂತವಾಗಿದೆ. ಜೊತೆಗೆ ಇದರ ದೇಹದಲ್ಲಿ ಔಷಧೀಯ ಗುಣಗಳಿವೆ ಎಂದೋ ಅಥವಾ ಇನ್ನಾವುದೋ ಮೌಢ್ಯಕ್ಕೆ ಒಳಗಾಗಿ ಈನಿರುಪದ್ರವಿಯನ್ನು ಬೇಟೆಯಾಡಲಾಗುತ್ತಿದೆ.