‘ಬೆಂಗಳೂರನ್ನು ಸುಂದರವಾಗಿಸಲು ಬೇಕಾದದ್ದು ದೊಡ್ಡ ಬಜೆಟ್ನಲ್ಲಿ ನಿರ್ಮಿಸುವ ಭಾರಿ ಪ್ರತಿಮೆಗಳಲ್ಲ, ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಸಂಭ್ರಮಿಸುವ, ಗೌರವಿಸುವ ಪ್ರತೀಕಗಳು. ಅವು ನಮ್ಮ ಕೈವಶ ಆಗಬಹುದೇ’ ಎಂಬುದು ಎಂ.ಎಸ್.ಶ್ರೀರಾಮ್ ಅವರ ಪ್ರಶ್ನೆ (ಪ್ರ.ವಾ., ನ. 19).
ಆದರೆ ನಮ್ಮಲ್ಲಿನ ಸಮಸ್ಯೆ ಏನೆಂದರೆ, ಇಂತಹ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ಕಿವಿಗಳು ಇವೆಯೇ ಎನ್ನುವುದು. ಆ ಹೊತ್ತಿನ ಯಾರದೋ ಒತ್ತಡಕ್ಕೆ ಎಂಥದ್ದೋ ಒಂದನ್ನು ಮಾಡಿಬಿಟ್ಟರಾಯಿತು. ಆಮೇಲೆ ಅದನ್ನು ಮರೆತುಬಿಟ್ಟರಾಯಿತು. ಬೆಂಗಳೂರಿನಲ್ಲಿ ನಿರ್ಮಿಸಿರುವ ದ.ರಾ.ಬೇಂದ್ರೆ ಮತ್ತು ತೀನಂಶ್ರೀ ಅವರ ಪುತ್ಥಳಿಗಳಿಗೆ ಒದಗಿರುವ ಅನಾಥಸ್ಥಿತಿಯನ್ನು ಲೇಖಕರು ನಿರ್ದಿಷ್ಟವಾಗಿಯೇ ಬೊಟ್ಟುಮಾಡಿ ತೋರಿಸಿದ್ದಾರೆ. ಇದನ್ನು ನೋಡಿದಾಗ, ಕನ್ನಡದ ಕವಿ ಕಲಾವಿದರಂತಹ ಮಹನೀಯರು, ಕಲೆ-ಸೌಂದರ್ಯದ ನಯ ನಾಜೂಕುಗಳನ್ನು ಅರಿಯದವರ ಕೈವಶವಾಗದೆ ಅಜ್ಞಾತವಾಗಿ ಉಳಿಯುವುದೇ ಕ್ಷೇಮ ಎನಿಸುತ್ತದೆ.
ರಾಜಧಾನಿಯಲ್ಲಿ ಕನ್ನಡಪರ ಸಂಘಟನೆಗಳಿವೆ, ಜನಪ್ರತಿನಿಧಿಗಳಿದ್ದಾರೆ, ಮಿಗಿಲಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ, ಕನ್ನಡ ಸಾಹಿತ್ಯ ಪರಿಷತ್ತೇ ಇದೆ. ಏನಿದ್ದರೇನು? ಗತಿಸಿದ ಈ ಮಹನೀಯರ ಪುತ್ಥಳಿಗಳು ಅನಾದರಕ್ಕೆ ಒಳಗಾಗಿರುವುದು ಇವರ್ಯಾರ ಗಮನಕ್ಕೂ ಬಂದಿಲ್ಲದಿರುವುದೇ ಸೋಜಿಗ! ಕನ್ನಡಿಗರು ನಿರಭಿಮಾನಿ ಗಳೆಂದು ಬಹು ಹಿಂದೆ ನೊಂದು ನುಡಿದರು ಹಿರಿಯರು. ಆ ಮಾತನ್ನು ಇಂದಿಗೂ ಸಾರ್ಥಕಗೊಳಿಸುತ್ತಿದ್ದೇವೆ.