ತಮ್ಮವರು ಎಂದು ಹೇಳಿಕೊಳ್ಳಲು ಯಾರೊಬ್ಬರೂ ಇಲ್ಲದೆ ಬದುಕುತ್ತಿರುವ ಎಷ್ಟೋ ಅನಾಥ ಮಕ್ಕಳು ನಮ್ಮ ನಡುವಿದ್ದಾರೆ. ಇಂತಹವರನ್ನು ಕೆಲವು ಆಶ್ರಮಗಳು ಸಲಹುತ್ತಿವೆ. ಆದರೆ ಈ ಮಕ್ಕಳು ಪ್ರಮುಖ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಸೌಲಭ್ಯವನ್ನು ಮೀಸಲಾತಿ ಮೂಲಕ ನೀಡಲಾಗುತ್ತಿದೆ (ಸಾಮಾನ್ಯ ಅಭ್ಯರ್ಥಿ ಗಳು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹೈದ್ರಾಬಾದ್ ಕರ್ನಾಟಕ). ಹಾಗೆಯೇ ವಿದ್ಯಾಭ್ಯಾಸ ಅಥವಾ ಸರ್ಕಾರಿ ಉದ್ಯೋಗಕ್ಕೂ ಮೀಸಲಾತಿ, ಒಳ ಮೀಸಲಾತಿ ಅನ್ವಯಿಸುತ್ತದೆ (ಕನ್ನಡ ಮಾಧ್ಯಮ ಅಭ್ಯರ್ಥಿ, ಯೋಜನಾ ನಿರಾಶ್ರಿತರು, ಗ್ರಾಮೀಣ ಅಭ್ಯರ್ಥಿ, ಅಂಗವಿಕಲರು, ಮಹಿಳಾ ಮೀಸಲಾತಿ). ಆದರೆ ಮೀಸಲಾತಿಗೆ ಬೇಕಾದ ಪ್ರಧಾನ ಅರ್ಹತೆಗಳನ್ನು ಹೊಂದಲು ವಿಫಲವಾಗುವ ಎಷ್ಟೋ ಅನಾಥ ಮಕ್ಕಳು ಇಂಥ ಸೌಲಭ್ಯಗಳಿಂದ ವಂಚಿತವಾಗುವುದಿಲ್ಲವೇ? ಆದ್ದರಿಂದ ಕೌಟುಂಬಿಕ ಚೌಕಟ್ಟಿನಿಂದ ಬೇರಾಗಿರುವ ಅನಾಥ ಮಕ್ಕಳಿಗಾಗಿ ಎಲ್ಲ ಸರ್ಕಾರಿ ಸೌಲಭ್ಯಗಳಲ್ಲಿ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ಇದು ನೊಂದವರ ಬದುಕಿನಲ್ಲಿ ಆಶಾಕಿರಣದಂತೆ ಕಂಡುಬರುತ್ತದೆ. ಸರ್ಕಾರವೇ ಒಂದು ಕೌಟುಂಬಿಕ ಸಂಸ್ಥೆಯಂತೆ ಸಲಹುವುದರಿಂದ, ಯಾರೂ ಅನಾಥರಲ್ಲ ಎಂಬ ಭಾವನೆ ಮೂಡಿಸಿದಂತೆಯೂ ಆಗುತ್ತದೆ.