ನಮ್ಮ ದೇಶದ ನಾಗರಿಕರೆಲ್ಲರಿಗೂ ಏಕರೂಪದ ಗುರುತಿನ ಚೀಟಿ ನೀಡುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಆಧಾರ್ ಚೀಟಿ ಯೋಜನೆಯ ಅಧ್ವಾನಗಳು ಮುಗಿಯುವಂತೆ ಕಾಣುತ್ತಿಲ್ಲ. ಒಂದೆಡೆ ಆಧಾರ್ ಪಡೆಯುವುದು ಕಡ್ಡಾಯವಲ್ಲವೆಂದು ಅಧಿಕೃತವಾಗಿ ಕೇಂದ್ರಸರ್ಕಾರವು ರಾಜ್ಯಸಭೆಯಲ್ಲಿ ಹೇಳಿಕೆ ನೀಡುತ್ತದೆ. ಆದರೆ ಅಡುಗೆಯ ಅನಿಲಕ್ಕೆ ಸಹಾಯಧನವನ್ನು ಬ್ಯಾಂಕ್ ಮೂಲಕ ಪಡೆಯಲು ಆಧಾರ್ ಸಂಖ್ಯೆ ಅಗತ್ಯವೆಂದು ತೈಲ ಕಂಪೆನಿಗಳು ಹೇಳುತ್ತಿವೆ.
ಶಿಕ್ಷಣ ಇಲಾಖೆ ವಿದ್ಯಾರ್ಥಿವೇತನ ಪಡೆಯಲು ಆಧಾರ್ ಬೇಕೆನ್ನುತ್ತದೆ!
ಆಧಾರ್ ಇದ್ದರೆ ಹಲವು ವಿಧದ ದಾಖಲೆಗಳು ಅನವಶ್ಯಕ ಎಂದು ಹೇಳಿದ ಸರ್ಕಾರದ ಮಾತು ನಂಬಿ ಸಾರಿಗೆ ಇಲಾಖೆಯಲ್ಲಿ ವಾಹನ ಚಾಲನ ಪತ್ರ ಪಡೆಯಲು ಹೋದರೆ ಆಧಾರ್ ಚೀಟಿಯಲ್ಲಿ ಕೇವಲ ಜನ್ಮವರ್ಷ ಮಾತ್ರ ನಮೂದಾಗಿರುವುದರಿಂದ ಜನ್ಮದಿನಾಂಕ ಖಚಿತವಾಗಿ ತಿಳಿಯಲು ಹತ್ತನೇ ತರಗತಿಯ ಅಂಕಪಟ್ಟಿಯನ್ನೂ ತರುವಂತೆ ಹೇಳುತ್ತಿದ್ದಾರೆ. ಜನ್ಮದಿನಾಂಕ ಖಚಿತವಾಗಿ ಆಧಾರ್ ಚೀಟಿಯಲ್ಲಿ ನಮೂದಿಸಿದ್ದರೆ ಅದೊಂದನ್ನು ದಾಖಲೆಯನ್ನಾಗಿ ಪರಿಗಣಿಸಲು ಸಾಧ್ಯವಾಗುತ್ತಿತ್ತು. ಇನ್ನಿತರ ಜನ್ಮದಾಖಲೆಗಳು ಬೇಕಿರಲಿಲ್ಲ.
ನಾನು, ನನ್ನ ಕುಟುಂಬದೊಂದಿಗೆ ಏಕಕಾಲದಲ್ಲಿ ಆಧಾರ್ಗೆ ನೋಂದಣಿ ಮಾಡಿಸಿ 7 ತಿಂಗಳುಗಳು ಉರುಳಿದವು. ನನ್ನ ಮಗನೊಬ್ಬನ ಚೀಟಿ ಬಿಟ್ಟರೆ ಉಳಿದವರ ಚೀಟಿ ಇನ್ನೂ ಬಂದಿಲ್ಲ. ಇದೇಕೆ ಇಂತಹ ಅಧ್ವಾನ?