ಮಹಾರಾಷ್ಟ್ರದ ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಮರಾಠಿಯನ್ನು ಕಡ್ಡಾಯ ಮಾಡಲು ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಶಿಕ್ಷಣ ಸಚಿವರು ಹೇಳಿದ್ದಾರೆ. ಇದು ಸರಿಯಾದ ನಿಲುವು. ತಾವು ನೆಲೆಸಿರುವ ನೆಲದ ಭಾಷೆ ಮತ್ತು ಇತಿಹಾಸದ ಅರಿವು ಸಹಜವಾಗಿ ಒಬ್ಬ ನಾಗರಿಕನಿಗೆ ಇರಬೇಕಾಗುತ್ತದೆ.
ಆದರೆ ಕೇಂದ್ರದ ಪಠ್ಯಕ್ರಮದಲ್ಲಿ ನಮ್ಮ ಮಕ್ಕಳು ಮಾತ್ರ ನೆಲದ ಭಾಷೆಯನ್ನೂ ಕಲಿಯುವುದಿಲ್ಲ, ಇಲ್ಲಿನ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳುವುದಿಲ್ಲ. ಏಕೆಂದರೆ ಈ ಪಠ್ಯಕ್ರಮಗಳಲ್ಲಿ ಕನ್ನಡ ಭಾಷೆ ಕಡ್ಡಾಯವಿಲ್ಲ, ಆದರೆ ಹಿಂದಿ ಭಾಷೆ ಕಡ್ಡಾಯವಾಗಿದೆ. ಇನ್ನು ಕರ್ನಾಟಕದ ಇತಿಹಾಸ ಒಂದಿಷ್ಟು ಸಾಲುಗಳಲ್ಲಿ ಮುಗಿದುಹೋಗಿದೆ. ರಾಜ್ಯದ ಭಾಷೆ, ಇತಿಹಾಸ ಮರೆಮಾಚಿ ರಾಷ್ಟ್ರೀಯತೆಯ ಪಾಠ ಹೇಳುವುದು ವೈವಿಧ್ಯ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಅಣಕಿಸಿದಂತೆ.
ತಮ್ಮ ಶೌರ್ಯ, ಪರಾಕ್ರಮದ ಮೂಲಕ ಒಂದು ಕಾಲದಲ್ಲಿ ನರ್ಮದಾ ತೀರದವರೆಗೆ ಕನ್ನಡ ರಾಜ್ಯ ಸ್ಥಾಪಿಸಿದ್ದ ರಾಜರು, ಜಗತ್ತಿಗೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ಬಸವಣ್ಣ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು, ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ, ಧೀರ ಮಹಿಳೆ ಓಬವ್ವ ಅವರ ಬಗ್ಗೆ ಕನ್ನಡದ ಮಕ್ಕಳು ತಿಳಿಯುವಂತಾಗಬೇಕು. ನೆಲದ ಭಾಷೆಯನ್ನು ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕಡ್ಡಾಯಗೊಳಿಸುವ ಜೊತೆಗೆ, ತಾಯ್ನುಡಿ ಕಲಿಕೆ ಎತ್ತಿ ಹಿಡಿಯುವ ಸಮಾನ ಶಿಕ್ಷಣ ನೀತಿ ಜಾರಿಯಾಗಬೇಕು.