1954 ರಿಂದಲೂ ಎಲ್ಲಾ ಲಿಂಗಾಯತ ಸ್ವಾಮಿಗಳ ಜೊತೆಗೂ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ಬ್ರಾಹ್ಮಣ ಮಠಾಧಿಪತಿಗಳಿಗೂ ವೀರಶೈವ ಮಠಾಧಿಪತಿಗಳಿಗೂ ಸ್ನೇಹ ಸಮಾವೇಶವನ್ನು ನಾನೇ ಆರಂಭಿಸಿದ್ದಾಗಿದೆ.
ಮಠಗಳ ಎಂಡೋಮೆಂಟ್ ವಿವಾದದ ಬಗ್ಗೆ ಮಠಾಧಿಪತಿಗಳ ಸಮಾವೇಶವನ್ನು ದಿವಂಗತ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1978 ರ ಸುಮಾರಿಗೆ ನಡೆದಿದೆ. ಅದಕ್ಕಿಂತಲೂ ಮೊದಲೇ ನಾನು ದಲಿತರ ಕೇರಿಗಳಿಗೆ ಹೋಗಿ ಅಸ್ಪೃಶ್ಯತಾ ನಿವಾರಣೆಯ ಪ್ರಯತ್ನವನ್ನು ಪ್ರಾರಂಭಿಸಿದ್ದೆ.
ದಲಿತರನ್ನೇ ಅಸ್ಪೃಶ್ಯರಲ್ಲವೆಂದು ಪರಿಗಣಿಸಿ ಅವರ ಕೇರಿ,ಮನೆಗಳಿಗೆ ಹೋಗಿ ಅವರನ್ನು ಸ್ಪರ್ಶಿಸಿದ ನಾನು ಪ್ರತಿಷ್ಠಿತ ಲಿಂಗಾಯತ ಮಠಾಧೀಶರ ಜೊತೆಗೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೇನೆಂದು ಕಲ್ಪಿಸಲೂ ಸಾಧ್ಯವಿಲ್ಲ. ವೀರಶೈವ ಮಠಾಧೀಶರನ್ನಾಗಲಿ ಇತರ ಮಠಾಧೀಶರನ್ನಾಗಲಿ ಅಗೌರವಿಸಿಲ್ಲ. ಎಲ್ಲರ ಬಗ್ಗೆಯೂ ನನಗೆ ವಿಶೇಷ ಅಭಿಮಾನವಿದೆ.