ಕರ್ನಾಟಕದ ಇಂದಿನ ರಾಜಕೀಯ ಪರಿಸ್ಥಿತಿ ಅತ್ಯಂತ ಕಳವಳಕಾರಿ ಮಟ್ಟವನ್ನು ತಲುಪಿರುವಂತಿದೆ. ಇಡೀ ದೇಶಕ್ಕೆ ಆದರ್ಶಪ್ರಾಯವೆನಿಸುವಂತಹ ಲೋಕಾಯುಕ್ತ ವ್ಯವಸ್ಥೆ ಹೊಂದಿದ್ದ ಈ ರಾಜ್ಯ, ಈಗ ಭ್ರಷ್ಟಾಚಾರದಲ್ಲಿ ಪ್ರಥಮಸ್ಥಾನದಲ್ಲಿದೆ.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಭ್ರಷ್ಟಾಚಾರದ ಮೂಲವಾದ ರಾಜಕೀಯ ಭ್ರಷ್ಟಾಚಾರಿಗಳನ್ನೇ ಕೆಣಕುವ ಮೂಲಕ ಇಡೀ ವಾತಾವರಣವನ್ನೇ ಬದಲಾಯಿಸಿಬಿಟ್ಟರು.
ಜನಪರ ಮುಖವಾಡ ಧರಿಸಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದವರ ಮುಖವಾಡ ಕಳಚಿಬಿದ್ದಿದೆ. ನ್ಯಾಯನಿಷ್ಠ ಅಧಿಕಾರಿಗಳು ಕೆಲವರು, ಲೋಕಾಯುಕ್ತಕ್ಕೆ ಘನತೆ ತಂದುಕೊಟ್ಟು ಭ್ರಷ್ಟ ರಾಜಕೀಯ ನಾಯಕರನ್ನು ನಿರ್ದಾಕ್ಷಿಣ್ಯವಾಗಿ ತನಿಖೆಗೆ ಒಳಪಡಿಸಿದರು.
ಈಗ ಹೆಗ್ಡೆಯವರನ್ನು ಲೋಕಾಯುಕ್ತ ಸ್ಥಾನಕ್ಕೆ ಕರೆತಂದವರೇ ಅವರಿಗೆ ತಿರುಗಿ ಬಿದ್ದಿದ್ದಾರೆ. ಅವರ ನ್ಯಾಯ ನಿಷ್ಠುರತೆಯನ್ನು ಹೊಗಳುತ್ತಿದ್ದವರೇ ಹೀನ ಆರೋಪ ಹೊರಿಸುತ್ತಿದ್ದಾರೆ. ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಅವರ ಬೆಂಬಲಿಗರು ಸಂತೋಷ್ ಹೆಗ್ಡೆಯವರ ವಿರುದ್ಧ ದೋಷಾರೋಪಣೆ ಮಾಡುತ್ತಿದ್ದಾರೆ.
ದೇಶದ ಮಾಜಿ ಪ್ರಧಾನಿಯೊಬ್ಬರು ತನ್ನ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅವರ ಬೆದರಿಕೆಗೆ ಮಣಿದ ದುರ್ಬಲ ಮುಖ್ಯಮಂತ್ರಿ, ಅಧಿಕಾರಿಗೆ ರಕ್ಷಣೆ ಕೊಡದೆ, `ಅವರನ್ನೇ ವರ್ಗ ಮಾಡಿದೆ~ನೆಂದು ನಾಚಿಕೆಯಿಲ್ಲದೆ ಹೇಳಿಕೆ ಕೊಡುತ್ತಾರೆ.
ಇಂತಹ ದುರ್ದಿನಗಳಲ್ಲಿ ಕರ್ನಾಟಕದ ವಿವೇಕವಂತ ಜನತೆ ಮೂಕ ಪ್ರೇಕ್ಷಕರಾಗಿ ಉಳಿಯದೆ, ಸಿಡಿದೇಳುವ ಅಗತ್ಯವಿದೆ. ನ್ಯಾ. ಹೆಗ್ಡೆ, ಪೊಲೀಸ್ ಅಧಿಕಾರಿ ಗಾಂವ್ಕರ್ ಬೆನ್ನಿಗೆ ಜನ ನಿಲ್ಲಬೇಕಿದೆ. ಇಲ್ಲದಿದ್ದರೆ ಕರ್ನಾಟಕದ ಜನತೆಯನ್ನು ಇಡೀ ರಾಷ್ಟ್ರ ಹಂಗಿಸುವ ಕಾಲ ಬರಬಹುದು!