ಮೂಡಲಪಾಳ್ಯ ವೃತ್ತದಿಂದ ನಾಗರಭಾವಿಯ ವರ್ತುಲ ರಸ್ತೆಯ ಕಡೆಗೆ ಹೋಗುವ ಮೇಲ್ಸೇತುವೆಯ ಎಡಭಾಗದ, ಅಂದರೆ ನಾಗರಭಾವಿ 12ನೇ ವಿಭಾಗದ ರಸ್ತೆಯ ಎಡಭಾಗದಲ್ಲಿ ಎಸೆದ ಕಸದ ಪ್ಲಾಸ್ಟಿಕ್ ಚೀಲಗಳು ಗಾಳಿ ತುಂಬಿಕೊಂಡು ಬಲೂನಿನಂತೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಚಾಲಕರ ಮೈಮೇಲೆಲ್ಲಾ ಹಾರಾಡುತ್ತಾ ಬೀಳುತ್ತಿರುತ್ತವೆ ಹಾಗೂ ರಸ್ತೆಯ ತುಂಬಾ ಹರಡಿಕೊಂಡು ವಾಹನಗಳ ಚಕ್ರಕ್ಕೆ ಸಿಕ್ಕಿ ಸಿಡಿದು ಶಬ್ದ ಮಾಡುತ್ತವೆ.
ಪರಿಸರ ಮಾಲಿನ್ಯವಾಗುವುದರೊಂದಿಗೆ ಇಲ್ಲಿನ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಒದಗಿದೆ. ಪಾದಚಾರಿಗಳೂ ಈ ಕಸವನ್ನು ತುಳಿದುಕೊಂಡೇ ಓಡಾಡಬೇಕಾಗಿದೆ. ಆದ್ದರಿಂದ ತಕ್ಷಣ ರಾಶಿ ರಾಶಿಯಾಗಿ ಬಿದ್ದಿರುವ ಕಸವನ್ನು ತೆರವುಗೊಳಿಸಿ ನಾಗರಿಕರು, ವಾಹನ ಸವಾರರು ಹಾಗೂ ಮೋಟಾರು ವಾಹನಗಳು ನಿರಾತಂಕವಾಗಿ ಚಲಿಸುವಂತೆ ಸಂಬಂಧಿಸಿದ ಇಲಾಖೆಯವರು ಗಮಹರಿಸಬೇಕೆಂದು ಕೋರುತ್ತೇವೆ.