ನಾಲ್ಕು ದಶಕದ ರಾಜಕೀಯ ಜೀವನದ ನಂತರವೂ, ಮುಖ್ಯಮಂತ್ರಿ ಸ್ಥಾನವನ್ನು ಏರಿ ಇಳಿದರೂ, ಹಗರಣಗಳ ಆರೋಪ ಹೊತ್ತು ಜೈಲಿಗೆ ಹೋಗಿ ಬಂದರೂ, ದಿನಬೆಳಗಾದರೆ ದೇವಾಲಯಗಳನ್ನು ಸುತ್ತಿದರೂ, ಮಠಾಧಿಪತಿಗಳ ಕಾಲಿಗೆ ಬಿದ್ದರೂ ರಾಜಕೀಯ ಮುತ್ಸದ್ಧಿತನವಾಗಲಿ, ರಾಜಕೀಯ ಪ್ರಬುದ್ಧತೆಯಾಗಲಿ ದಕ್ಕುವುದಿಲ್ಲ ಎಂಬುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಕಾಲಿಕ ನಿದರ್ಶನವಾಗುವಂತೆ ಕಾಣುತ್ತಿದೆ.
ಮಾಜಿ ಆದ ನಂತರವಾದರೂ ಎಷ್ಟು ಮುತ್ಸದ್ಧಿತನದಿಂದ ಕಾಣಿಸಬೇಕಿತ್ತೋ ಯಡಿಯೂರಪ್ಪ ಅವರು ಒಂದು ಕ್ಷಣವೂ ಹಾಗೆ ಕಾಣಿಸಿಕೊಂಡಿಲ್ಲ. `ಇವ ನಮ್ಮವ, ಇವ ನಮ್ಮವ~ ಎಂಬ ಗುಂಪುಗಾರಿಕೆಯ ಮೂಲಕ ಚಿಲ್ಲರೆ ರೆಸಾರ್ಟ್ ರಾಜಕೀಯ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ತಾವೇ ಕಟ್ಟಿ ಬೆಳೆಸಿದ ಪಕ್ಷಕ್ಕೆ ಯಡಿಯೂರಪ್ಪ ಮಗ್ಗುಲ ಮುಳ್ಳಾಗುತ್ತಿರುವುದು `ಭಸ್ಮಾಸುರ ನೃತ್ಯ~ದಂತೆ ಕಾಣುತ್ತಿದೆ.
ದಶಕಗಳಿಂದ ಬಿಜೆಪಿಗಾಗಿ ಹಗಲಿರುಳೂ ದುಡಿದ ಲಕ್ಷಾಂತರ ಕಾರ್ಯಕರ್ತರ ತಲೆಯ ಮೇಲೆಯೇ ಕಾಲಿಟ್ಟು ತಮ್ಮ ಹಾಗೂ ಹಿಂಬಾಲಕರ `ಸಂಸ್ಕಾರ~ ಎಂತಹುದೆಂಬುದನ್ನು ಅವರು ತೋರಿಸಲು ಹೊರಟಂತಿದೆ. ಬಿಜೆಪಿಗೇ ಈಗ `ಆಪರೇಷನ್ ಕಮಲ~ ಮಾಡುತ್ತಿರುವಂತಿದೆ.